ಪುತ್ತೂರು: ಕಾನೂನು ಮತ್ತು ಸಂವಿಧಾನದಡಿಯಲ್ಲಿ ನಿಸ್ವಾರ್ಥವಾಗಿ ಸೇವಾಮನೋಭಾವದಿಂದ ಹಲವು ಜನಪರ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಪರಿಸರ ರಕ್ಷಣೆ ಅಭಿಯಾನದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿಯವರ ಹತ್ಯೆಗೆ ಸಂಚು ರೂಪಿಸಿರುವ ಭೂಗತ ಪಾತಕಿಗಳನ್ನು ಹಾಗೂ ಇವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿರುವವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಮಾಧ್ಯಮ ಮತ್ತು ದಿನಪತ್ರಿಕೆಗಳಲ್ಲಿ ಖ್ಯಾತ ಪರಿಸರವಾದಿಗಳು ಹಾಗೂ ಯುವ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅವರ ಹತ್ಯೆಗೆ ಭೂಗತ ಪಾತಕಿಗಳು ಸಂಚು ರೂಪಿಸಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಬರುತ್ತಿರುವ ಸುದ್ದಿಯನ್ನು ತಿಳಿದು ನಮಗೆಲ್ಲ ದಿಗ್ಬ್ರಮೆಯ ಜೊತೆಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನ ಮುನ್ನೆಚ್ಚರಿಕೆಯ ಕ್ರಮವಾಗಿ ಯುವ ಸಂಸ್ಥಾಪಕ ಅಧ್ಯಕ್ಷರ ರಕ್ಷಣೆಗಾಗಿ ಗೃಹ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ನೀಡಬೇಕು. ಈ ವಿಚಾರವನ್ನು ಚರ್ಚಿಸಿ ಸಂಬಂಧ ಪಟ್ಟ ಇಲಾಖೆಗೆ ಆದೇಶವನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಲಚಂದರ್, ರಾಜ್ಯ ಸಂಚಾಲಕ ಪ್ರಕಾಶ್ ಟಿ., ಬೆಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ ಜೆ.ಕೆ. ಉಪಸ್ಥಿತರಿದ್ದರು.