ವಿಟ್ಲ: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಅಗರಿಯಲ್ಲಿ ನಡೆದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ತಂಡಗಳ ನಡುವಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳವರು ನೀಡಿದ ದೂರಿನಂತೆ ಹತ್ತೊಂಬತ್ತು ಮಂದಿಯ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ ಮತ್ತೆ ಮೂವರು ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕರಿಂಬಿನಾಡಿ ನಿವಾಸಿ ಆನಂದ ಬೆಳ್ಚಾಡ ರವರ ಪುತ್ರ ಚಂದ್ರಹಾಸ(27 ವ.)ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪ್ರಶಾಂತ್ , ತೇಜಸ್ , ಗೀರಿಶ, ಗಣೇಶ್ , ಶರತ್, ಧನು, ಮುನ್ನಾ, ಚೇತನ, ವಿನಿತ, ದಿನೇಶ್, ಶಶಿಕುಮಾರ್ ಸಹಿತ ಇತರ ಇರ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ಇಡ್ಯ ಗ್ರಾಮದ ಸುರತ್ಕಲ್ ಕೃಷ್ಣಾಪುರ ನಿವಾಸಿ ಕೃಷ್ಣ ಭಂಡಾರಿ ರವರ ಪುತ್ರ ಪ್ರಶಾಂತ್ ಅಲಿಯಾಸ್ ಪಚ್ಚು(30 ವ.) ರವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಂದ್ರಹಾಸ, ನಾಗೇಶ್, ದೇವದಾಸ ಸಹಿತ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆ ಜೂ.19ರಂದು ಸಾಯಂಕಾಲ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಗ್ರಾಮದ ಅಗರಿ ಎಂಬಲ್ಲಿ ನಡೆದಿತ್ತು. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ತೆರಳಿ ಮಾಹಿತಿ ಸಂಗ್ರಹಿಸಿ ಸಾಲೆತ್ತೂರು ಭಾಗದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿತ್ತು.
ಸುರತ್ಕಲ್ ಕೃಷ್ಣಾಪುರ ನಿವಾಸಿ ಪ್ರಶಾಂತ್ ಅಲಿಯಾಸ್ ಪಚ್ಚು ಎಂಬವರಿಗೆ ಚೂರಿ ಇರಿತ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿಗಳಾದ ಚಂದ್ರಹಾಸ್ ಕನ್ಯಾನ, ನಾಗೇಶ್ ಮತ್ತು ದೇವದಾಸ ಎಂಬವರನ್ನು ಮಡಿಕೇರಿ ಸಮೀಪದಲ್ಲಿ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ಲಭಿಸಿದೆ.
ಘಟನೆಗೆ ಸಂಬಂಧಿಸಿದಂತೆ ಚಂದ್ರಹಾಸರವರು ನೀಡಿದ ದೂರಿನಂತೆ ವಿಟ್ಲ ಠಾಣಾ ಪೊಲೀಸರು ಕಡಂಬು ನಿವಾಸಿ ಗಣೇಶ್, ಕುಡ್ತಮುಗೇರು ನಿವಾಸಿಗಳಾದ ದಿನೇಶ್, ವಿನೀತ್, ಅಡ್ಯನಡ್ಕ ನಿವಾಸಿ ಶಶಿಕುಮಾರ್ ರವರನ್ನು ಈ ಹಿಂದೆಯೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಒಟ್ಟು ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳ ಬಂಧನವಾದಂತಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಬಲೆಬೀಸಿದ್ದಾರೆ.