- ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತಿರುವುದು ಅಭಿನಂದನೀಯ-ಗುಡ್ಡಪ್ಪ ಬಲ್ಯ
ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕೂಡ ಪ್ರತಿಭೆ ಇದೆ. ಅವಕಾಶ ಬಂದಾಗ ತಮ್ಮಲ್ಲಿ ಸುಪ್ತವಾಗಿರುವಂತಹ ಪ್ರತಿಭೆಗಳನ್ನು ಪ್ರಕಟಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಸಾಹಿತ್ಯ, ವಿಜ್ಞಾನ, ಕಲಾ, ಕ್ರೀಡೆ ಮುಂತಾದ ಸಂಘಗಳನ್ನು ಹುಟ್ಟು ಹಾಕಿ ಅದರ ಮುಖಾಂತರ ವಿದ್ಯಾರ್ಥಿಗಳ ಪ್ರತಿಭೆಯ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕೊಡುತ್ತಿರುವುದು ಶ್ಲಾಘನೀಯ ಎಂದು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗುಡ್ಡಪ್ಪ ಬಲ್ಯ ಹೇಳಿದರು. ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಶಾಲಾ ಮುಖ್ಯಗುರು ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ನಿವೃತ್ತ ಮುಖ್ಯಗುರು ಗೋಪಾಲಕೃಷ್ಣ ಬಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಗಿರೀಶ್ ಕಳಿಗೆ, ಪ್ರಾಕ್ತನ ವಿದ್ಯಾರ್ಥಿ ಸತೀಶ್ ಕಳಿಗೆ, ಶ್ರೀ ವೇದವ್ಯಾಸ ವಿದ್ಯಾಲಯದ ಮುಖ್ಯಗುರು ಪ್ರಶಾಂತ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಕುಮಾರಿ ದೀಕ್ಷಾ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ನಾಯಕ ದೀಕ್ಷಿತ್ ವಂದಿಸಿದರು. ಶಿಕ್ಷಕ ಸತ್ಯ ಶಂಕರಭಟ್ ಕಾರ್ಯಕ್ರಮ ನಿರೂಪಿಸಿದರು.