ಪುತ್ತೂರು: ಪುತ್ತೂರು ಆದರ್ಶ ಆಸ್ಪತ್ರೆಯ ವೈದ್ಯ ಡಾ. ಪ್ರಸಾದ್ ಎಮ್.ಕೆ. ಭಂಡಾರಿಯವರಿಗೆ ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(IMA) ವೈದ್ಯರ ದಿನದ ಪ್ರಶಸ್ತಿ ಲಭಿಸಿದೆ. ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಸ್ಟೇಟ್ ಬೋರ್ಡ್ನಿಂದ ಪ್ರತಿ ವರ್ಷ ಕೆಲವೇ ಕೆಲವು ವೈದ್ಯರಿಗೆ ಐ.ಎಮ್.ಎ.-ಕೆ.ಎಸ್.ಬಿ ಡಾಕ್ಟರ್ಸ್ಡೇ ಅವಾರ್ಡ್ ನೀಡುತ್ತಿದ್ದು ಈ ಬಾರಿ ಪುತ್ತೂರಿನ ವೈದ್ಯ ಡಾ. ಪ್ರಸಾದ್ ಭಂಡಾರಿರವರಿಗೆ ಒಲಿದಿದೆ.
ಡಾ. ಪ್ರಸಾದ್ ಭಂಡಾರಿಯವರು ಐಎಮ್ಎಯ ಕಾರ್ಯಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಂಡಿದ್ದು ಅವರು ನೀಡಿದ ಉತ್ತಮ ವೈದ್ಯಕೀಯ ಸೇವೆ ಹಾಗೂ ಅವರ ಸಮಾಜಮುಖೀ ಕೆಲಸಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ವೈದ್ಯರ ದಿನವಾದ ಜು.1ರಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಕ್ಯಾಂಪಸ್ನ ಬಿಎಂಸಿ ಅಲುಮ್ನಿಂ ಅಸೋಸಿಯೇಷನ್ ಕಟ್ಟಡದ ಡಾ. ಬಸವ ರಾಜೇಂದ್ರ ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಲೋಕಾಯುಕ್ತ, ಎನ್. ಸಂತೋಷ್ ಹೆಗ್ಡೆಯವರಿಂದ ಡಾ. ಪ್ರಸಾದ್ ಭಂಡಾರಿಯವರು ಪ್ರಶಸ್ತಿ ಸೀಕರಿಸಲಿದ್ದಾರೆ.
ಪುತ್ತೂರು IMA ಬ್ರಾಂಚ್ ಇತಿಹಾಸದಲ್ಲಿ ಮೊದಲ ಬಾರಿ: ಪುತ್ತೂರು ವೈದ್ಯಕೀಯ ಸಂಘದ ಇತಿಹಾಸದಲ್ಲಿ ಐ.ಎಮ್.ಎ.-ಕೆ.ಎಸ್.ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಮೊದಲ ಬಾರಿಗೆ ಪುತ್ತೂರಿನ ವೈದ್ಯರಿಗೆ ಲಭಿಸಿದೆ.