ಪುತ್ತೂರು: ಕಾಂಗ್ರೆಸ್ ಇವತ್ತು ನಿರ್ಣಾಮ ಆಗುವ ಹಂತಕ್ಕೆ ಬಂದಿದೆ. ಆದರೂ ಮಳೆಗಾಲದಲ್ಲಿ ಅಣಬೆ ಎದ್ದಂತೆ ಇದೆ. ಇದು ಶಾಶ್ವತವಲ್ಲ. ಇದನ್ನೂ ಕೂಡಾ ಶಾಶ್ವತವಾಗಿ ನಿರ್ಣಾಮ ಮಾಡುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜೂ. 28ರಂದು ನಡೆದ ಬಿಜೆಪಿ ನಗರ ಮಂಡಲದ ತಿಂಗಳ ಕಾರ್ಯನಿರ್ವಹಣಾ ಸಮಿತಿ ಸಭೆಯನ್ನು ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು. ಭ್ರಷ್ಟಾಚಾರ ವಿರುದ್ಧವಾಗಿ ಬಿಜೆಪಿ ಹೋಗುತ್ತಿದ್ದಾಗ ಭ್ರಷ್ಟಾಚಾರ ಮಾಡಿದ ವ್ಯಕ್ತಿಯ ಪರವಾಗಿ ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಹೋಗುತ್ತಿದೆ. ಅದೇ ರೀತಿ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಲು ಮತೀಯ ಶಕ್ತಿಗಳನ್ನು ಓಲೈಕೆ ಮಾಡುವ ಸಂಗತಿ ಮಾಡುತ್ತಿದೆ. ಬಹು ಸಂಖ್ಯಾತರನ್ನು ಕಡೆಗಣಿಸುತ್ತಿದೆ. ರಾಷ್ಟ್ರದ ಅಸ್ಮಿತೆಯ ವಿಚಾರ ಬಂದಾಗ ರಾಷ್ಟ್ರವನ್ನು ಮರೆಯುವ ಸಂಗತಿ ಮಾಡುತ್ತಿದೆ. ಇದರ ಪರಿಣಾಮ ಕಾಂಗ್ರೆಸ್ ಇವತ್ತು ನಿರ್ಣಾಮ ಆಗುವ ಹಂತಕ್ಕೆ ಬಂದಿದೆ. ಆದರೂ ಇವತ್ತು ಮಳೆಗಾಲದಲ್ಲಿ ಅಣಬೆ ಎದ್ದಂತೆ ಎದ್ದರೂ, ಅದು ಶಾಶ್ವತವಲ್ಲ. ಚುನಾವಣೆ ಬಂದಾಗ ಕಾಂಗ್ರೆಸ್ ಎಲ್ಲಿಂದಲೋ ಎದ್ದು ಕದ್ದರ್ ಶರ್ಟ್ ಹಾಕಿ ಬರುವ ಪ್ರಮೇಯವನ್ನು ಶಾಶ್ವತವಾಗಿ ನಾವು ನಿಲ್ಲಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಅಭಿವೃದ್ಧಿಯನ್ನು ಜನಮತವಾಗಿ ಪರಿವರ್ತನೆ ಮಾಡಬೇಕು:
ಕಳೆದ ವಿಧಾನಸಭೆ ಲೋಕಸಭೆ, ಆಮೇಲೆ ನಡೆದ ನಗರಸಭೆ ಚುನಾವಣೆ ಇರಬಹುದು. ಬಿಜೆಪಿ ಒಂದು ಪುತ್ತೂರಿನಲ್ಲಿ ಅಭೇದ್ಯ ಕೋಟೆಯಾಗಿದೆ. ರಾಮ್ ಭಟ್ರಂತಹ ಹಿರಿಯರ ಕಾಲದಿಂದ ಬಹಳ ಜನ ಕೆಲಸ ಮಾಡಿದ್ದಾರೆ. ಹಿರಿಯರ ಯೋಗದಾನಕ್ಕೆ ಕಿರಿಯರಾದ ನಮ್ಮಲ್ಲೆರ ಪ್ರಯತ್ನ ಸೇರಿಸಿದಾಗ ಮತ್ತೊಮ್ಮೆ ಬಿಜೆಪಿ ಪುತೂರು ನಗರ ಮಂಡಲದಲ್ಲಿ ಇತರ ಪಕ್ಷಗಳಿಂದ ವಿಭಿನ್ನವಾಗಿರಬೇಕೆಂದು ಹೇಳಿದ ಶಾಸಕ ಸಂಜೀವ ಮಠಂದೂರು ಅವರು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ದ್ರೌಪದಿ ಅವರನ್ನು ಮಾಡುವ ಮೂಲಕ ಬುಡಕಟ್ಟು ಜನಾಂಗದ ಮಹಿಳೆಗೂ ಈ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶ ಕೊಡುತ್ತದೆ ಎಂದರು. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕನ್ನು ಕೊಡಿಸುವ ಕೆಲಸ ಮಾಡಬೇಕು. ಪುತ್ತೂರು ನಗರಭೆ ವ್ಯಾಪ್ತಿಯಲ್ಲಿ ರೂ.10 ಕೋಟಿಯ ವಿಶೇಷ ಅಭಿವೃದ್ಧಿ, ರೂ. 3 ಕೋಟಿಯ ಅಮೃತನಗರೋತ್ಥಾನದಲ್ಲಿ ರಸ್ತೆ ಅಭಿವೃದ್ಧಿ, ರೂ. 117 ಕೋಟಿಯಲ್ಲಿ 24/7 ಜಲಸಿರಿ ಯೋಜನೆಯಂತಹ ಸರಕಾರದ ಕಾರ್ಯಕ್ರಮವನ್ನು ಸಂಘಟನೆಯೊಂದಿಗೆ ಕೊಂಡು ಹೋಗಬೇಕು. ಅಭಿವೃದ್ಧಿಯನ್ನು ಜನಮತವಾಗಿ ಪರಿವರ್ತನೆ ಮಡಬೇಕು ಎಂದು ಹೇಳಿದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಮಂಡಲದ ಉಪಾಧ್ಯಕ್ಷೆ ಜ್ಯೋತಿ ಆರ್ ನಾಯಕ್ ಪ್ರಾರ್ಥಿಸಿದರು. ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ ಸ್ವಾಗತಿಸಿದರು. ನಗರ ಮಂಡಲದ ಉಪಾಧ್ಯಕ್ಷ ಇಂದುಶೇಖರ್ ಕಾರ್ಯಕ್ರಮ ನಿರೂಪಿಸಿದರು.