ನಾ ಕಾರಂತ ಪೆರಾಜೆ ಅವರಿಗೆ ‘ಬ್ರ‍್ಯಾಂಡ್ ಮಂಗಳೂರು ಪ್ರಶಸ್ತಿ’

0

ಮಂಗಳೂರು: ಸೌಹಾರ್ದತೆ ಮತ್ತು ಮಾನವೀಯ ಮೌಲ್ಯದ ಬದುಕನ್ನು ಪ್ರತಿ ಬಿಂಬಿಸುವ ವರದಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಅಡಿಕೆ ಪತ್ರಿಕೆಯ ನಾ ಕಾರಂತ ಪೆರಾಜೆ ಆಯ್ಕೆಯಾಗಿದ್ದಾರೆ. ಸುಧಾ ಪತ್ರಿಕೆಯಲ್ಲಿ 2021ರ ಆಗಸ್ಟ್ ೧೧ರಂದು ಪ್ರಕಟಗೊಂಡ ನಾ ಕಾರಂತರ `ಗಾಂಧಿ ಭಾರತ- ಗ್ರಾಮ ಭಾರತ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯು ರೂ. 5,001 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ದಿ ಹಿಂದು ಪತ್ರಿಕೆಯ ಸಹಾಯಕ ಸಂಪಾದಕ ಅನಿಲ್ ಶಾಸ್ತ್ರಿ, ಪರಿಸರ ಪ್ರೇಮಿ ದಿನೇಶ್ ಹೊಳ್ಳ, ಮಂಚಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ನೇತೃತ್ವದ ಆಯ್ಕೆ ಸಮಿತಿ ಲೇಖನವನ್ನು ಆಯ್ಕೆ ಮಾಡಿದೆ. ಜುಲೈ ೧ರಂದು ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಶ್ಮಿ ಎಸ್.ಆರ್. ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡುವರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು. ವಿಜಯಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಅವರು ಕೋವಿಡ್ ನಂತರ ಮಾಧ್ಯಮದ ಸ್ಥಿತ್ಯಂತರ ಕುರಿತು ಉಪನ್ಯಾಸ ನೀಡಲಿದ್ದಾರೆ.

ಪರಿಚಯ: ಅಡಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಅವರು ನೆಲದ ನಾಡಿ, ತಳಿ ತಪಸ್ವಿ, ಕಾಡು ಮಾವು ಸಹಿತ 20 ಕೃಷಿ ಕೃತಿಗಳು, ಶೇಣಿ ಚಿಂತನ, ಅಮರಾವತಿ ಸಹಿತ ೧೫ ಯಕ್ಷಗಾನದ ಕೃತಿಗಳು, ೧೧ ಸಂಪಾದಿತ ಕೃತಿಗಳು, ಇತರ ೩ ಕೃತಿಗಳನ್ನು ರಚಿಸಿದ್ದಾರೆ. ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪ್ರಶಸ್ತಿ, ಮುರಘಾಶ್ರೀ ಪ್ರಶಸ್ತಿ, ಪಗೋ ಪ್ರಶಸ್ತಿ ಸಹಿತ ಹತ್ತಕ್ಕೂ ಹೆಚ್ಚು ಪ್ರಶಸ್ತಿ ಲಭಿಸಿದೆ. ಪದ್ಮಶ್ರೀ ಹರೇಕಳ ಹಾಜಬ್ಬರ ಬಗೆಗಿನ ಅಕ್ಷರ ಯೋಗಿಯ ನೋಡಲ್ಲಿ ಲೇಖನವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್‌ನ ಕನ್ನಡ ಪಠ್ಯದಲ್ಲಿ ಸೇರಿತ್ತು. ಎರಡು ಕೃಷಿ ಸಂಬಂಧಿ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆಗೊಂಡಿದೆ.

LEAVE A REPLY

Please enter your comment!
Please enter your name here