ಪುತ್ತೂರು: ತುಳುನಾಡಿನ ದೈವ ಶಕ್ತಿಯ ಕಾರಣಿಕತೆಯನ್ನು ತೋರಿಸುವ ಅದೆಷ್ಟೋ ಚಿತ್ರಗಳು ಬಂದು ಹೋಗಿದ್ದರೂ ಕಿರುಚಿತ್ರ ಲೋಕದ ಇತಿಹಾಸದಲ್ಲೇ ಸಂಚಲನ ಸೃಷ್ಟಿಸುವ ಮೂಲಕ ಹೊಸ ಇತಿಹಾಸವನ್ನು ಬರೆದ ‘ಧರ್ಮ ದೈವ’ ಕಿರುಚಿತ್ರ ಬಿಡುಗಡೆಗೊಂಡು ಜು.01 ಕ್ಕೆ ಒಂದು ವರುಷದ ಸಂಭ್ರಮದಲ್ಲಿದೆ. ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶಸಿದ ‘ಧರ್ಮ ದೈವ’ ಕಿರುಚಿತ್ರವು ತುಳುನಾಡಿನ ಒಂದು ದೈವ ಶಕ್ತಿಯ ಕಾರಣಿಕತೆಯ ಕಥೆಯನ್ನು ಒಳಗೊಂಡಿತ್ತು. ಒಂದು ಅದ್ಭುತ ಕಥಾ ವಸ್ತುವನ್ನು ಅತ್ಯಂತ ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಿ ಧರ್ಮ ದೈವ ಎಂಬ ಪರಿಪೂರ್ಣ ಕಿರು ಚಿತ್ರ ಜುಲೈ 1-2021 ರಂದು ಟಾಕೀಸ್ ಯಟ್ಯೂಬ್ ನಲ್ಲಿ ಬಿಡುಗಡೆ ಗೊಂಡು ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಆಳ್ವಾಸ್ ವಿದ್ಯಾಸಂಸ್ಥೆಯ ಡಾ|ಮೋಹನ್ ಆಳ್ವ ಹಾಗು ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ |ಯುಪಿ ಶಿವಾನಂದ ಅವರು ಲೋಕಾರ್ಪಣೆ ಮಾಡಿದ ಧರ್ಮ ದೈವ ಲಕ್ಷಾಂತರ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸೋನು ಕ್ರಿಯೆಷನ್ ಅಡಿಯಲ್ಲಿ ಸುಧಾಕರ್ ಪಡೀಲ್ ಚಿತ್ರವನ್ನು ನಿರ್ಮಿಸಿದ್ದು ಹಮೀದ್ ಪುತ್ತೂರು ಚಿತ್ರಕಥೆ ಬರೆದಿದ್ದರು. ತುಳು, ಕನ್ನಡ ಕಿರು ತೆರೆ ಹಿರಿತೆರೆಯ ಅನೇಕ ದಿಗ್ಗಜರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ರಮೇಶ್ ರೈ ಕುಕ್ಕುವಳ್ಳಿ, ಸುಂದರ್ ರೈ ಮಂದಾರ ಹಾಗು ದೀಕ್ಷಾ ರೈ ಅವರ ಅಭಿನಯದ ಜೊತೆಗೆ ತಾಂತ್ರಿಕ ತಂಡದ ಕೆಲಸ ಚಿತ್ರದ ಹೈಲೈಟ್ಸ್ ಆಗಿತ್ತು. ಧರ್ಮ ದೈವ ಚಿತ್ರವನ್ನು ಹಿರಿತೆರೆಯಲ್ಲಿ ಸಂಪೂರ್ಣ ಚಿತ್ರವಾಗಿಸುವ ಕೆಲಸ ನಡೆಯುತ್ತಿದ್ದು ಮುಂದಿನ ದಿನದಲ್ಲಿ ತುಳುನಾಡಿನ ದೈವದ ಕಾರ್ಣಿಕವನ್ನು ಬೆಳ್ಳಿಪರದೆಯಲ್ಲೂ ನೋಡುವ ಭಾಗ್ಯ ತುಳುನಾಡಿನ ಜನರಿಗೆ ಶೀಘ್ರದಲ್ಲಿ ಒದಗಿ ಬರಲಿದೆ ಎನ್ನುತ್ತಾರೆ ನಿರ್ದೇಶಕ. ಲಕ್ಷಾಂತರ ವೀಕ್ಷಕರ ಮನಗೆದ್ದಿರುವ ಧರ್ಮದೈವ ಟೀಮ್ ಒಂದು ವರುಷದ ಸಂಭ್ರಮದ ಯಶಸ್ಸನ್ನು ತಮ್ಮೆಲ್ಲ ವೀಕ್ಷಕ ಬಂಧುಗಳಿಗೆ ಅರ್ಪಣೆ ಮಾಡಿದೆ.