ಪುತ್ತೂರು: ಬಿಜೆಪಿ ಕಾರ್ಯಕ್ರಮವೊಂದರಲ್ಲಿ ವಿಶ್ವೇಶ್ವರ ಬಂಗಾರಡ್ಕರವರು ದಿ.ಇಂದಿರಾ ಗಾಂಧಿಯವರ ಬಗ್ಗೆ ಬಹಳ ನೋವಾಗುವ ಹಾಗೆ ಹೇಳಿದ್ದಾರೆ. ಇಂದಿರಾ ಗಾಂಧಿ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿದ್ದವರು. ನೆಹರೂ, ಲಾಲ್ ಬಹದ್ದೂರು ಶಾಸ್ತ್ರಿಯವರ ಪ್ರಧಾನಿ ಆಳ್ವಿಕೆಯ ನಂತರ ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಆ ಬಳಿಕದ ದಿನಗಳಲ್ಲಿ ರಾಷ್ಟ್ರ, ದೇಶಕ್ಕಾಗಿ ದುಡಿದು ರಾಷ್ಟ್ರಕ್ಕಾಗಿಯೇ ಪ್ರಾಣವನ್ನು ಬಿಟ್ಟಿದ್ದಾರೆ. ಅಂತಹವರ ಬಗ್ಗೆ ಗೌರವಯುತ ವಿಶ್ವೇಶ್ವರ ಭಟ್ರವರು ಇಂದಿರಾಗಾಂಧಿ ಭ್ರಪ್ಟಾಚಾರಿ, ತುರ್ತು ಪರಿಸ್ಥಿತಿ ಎನ್ನುವುದು ಕರಾಳ ದಿನ ಎಂದಿರುವುದು ಖಂಡನೀಯ. ಬಿಜೆಪಿಯ ಕಾರ್ಯಾಗಾರದಲ್ಲಿ ಇತಿಹಾಸದ ಪುಟ ಸೇರಿರುವ ಇಂದಿರಾ ಗಾಂದಿಯ ಬಗ್ಗೆ ಅವರ ಕೆಲಸ ಕಾರ್ಯಗಳ ಬಗ್ಗೆ ತಿರುಚಿ ಹೇಳುವ ಬದಲು ಇಂದಿರಾಗಾಂಧಿಯ ಕುರಿತಾದ ಸತ್ಯಾಸತ್ಯತೆಯ ವಿಚಾರಗಳ ಬಗ್ಗೆ ಕಾರ್ಯಾಗಾರ ಮಾಡಲಿ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು. ಅವರು ಸುದ್ದಿ ಮೀಡಿಯಾ ಸೆಂಟರ್ನಲ್ಲಿ ಜೂ.27ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
1996ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾದ ಬಳಿಕ ಮೀಸಲಾತಿ ಹಾಗೂ ಪಂಚವಾರ್ಷಿಕ ಯೋಜನೆಯಂತಹ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ದೇಶಕ್ಕಾಗಿ ತಂದಿದ್ದಾರೆ. ಬಿಜೆಪಿ ಬುಡಕಟ್ಟು ಮಹಿಳೆಯೋರ್ವರನ್ನು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿಸಿದೆ. ಈ ರೀತಿಯಲ್ಲಿ ಮಹಿಳೆಯರಿಗೆ ಹಾಗೂ ದಲಿತರಿಗೆ ಉನ್ನತ ಸ್ಥಾನಗಳು ದೊರೆಯುತ್ತಿರುವುದು ಕಾಂಗ್ರೆಸ್ ಮಾಡಿದ ಮೀಸಲಾತಿ ಯೋಜನೆಯಿಂದಾಗಿ ಆಗಿದೆ. ಇಂದಿರಾಗಾಂಧಿ ಮೀಸಲಾತಿ ತರದೇ ಇರದಿದ್ದರೆ ಮಹಿಳಾ ಹಾಗೂ ದಲಿತರ ಅಭಿವೃದ್ದಿ ಸಾಧ್ಯವಾಗುತ್ತಿರಲಿಲ್ಲ ಎಂದ ಚಿಲ್ತಡ್ಕ ಇಂದು ವಿಶ್ವೇಶ್ವರ ಭಟ್ ಬಂಗಾರಡ್ಕ ಶಾಲೆಗೆ ಹೋಗಿದ್ರೆ, ರಸ್ತೆಯಲ್ಲಿ ಓಡಾಡುತಿದ್ರೆ, ವಿದ್ಯುತ್, ನೀರು, ಬೆಳಕನ್ನು ಪಡೆಯುತ್ತಿದ್ದಾರೆ ಎಂದಾದರೆ ಅದು ಕಾಂಗ್ರೆಸ್ ಕೊಡುಗೆಯಾಗಿದೆ. ಇಂದಿರಾಗಂಧಿ ಮರಣ ಹೊಂದಿ ಅನೇಕ ವರ್ಷಗಳು ಕಳೆದರೂ ಇಂದಿಗೂ ತುರ್ತುಪರಿಸ್ಥಿತಿಯನ್ನು ಕರಾಳ ದಿನವೆಂದು ಆಚರಿಸಿ ಕಾರ್ಯಗಾರ ನಡೆಸಿದರೆ ಅದರಿಂದ ದೇಶಭಕ್ತಿ ಹುಟ್ಟಲು ಸಾಧ್ಯವೇ?, ಇದರ ಬದಲಾಗಿ ಬಿಜೆಪಿ ಆಡಳಿತಾವಧಿಯಲ್ಲಿ ಗ್ಯಾಸ್ ಸಬ್ಸಿಡಿ ಇಲ್ಲದಿರುವುದು, ಶುಚಿ ಯೋಜನೆಯ ವಿಫಲತೆ, ನಿರುದ್ಯೋಗ ಮುಂತಾದ ಸಮಸ್ಯೆಗಳ ಬಗೆಗೆ ಚರ್ಚಿಸಲು ಕಾರ್ಯಾಗಾರ ನಡೆಸಲಿ ಅದನ್ನು ಹೊರತುಪಡಿಸಿ ತಿರುಚಿ ಮಾತನಾಡುವುದರಲ್ಲಿ ಏನು ಅರ್ಥವಿದೆ ಭಟ್ರೆ ಎಂದ ದಿವ್ಯಪ್ರಭಾ ಚಿಲ್ತಡ್ಕ, ಪಾಕಿಸ್ಥಾನದ ಮೇಲಿನ ಯುದ್ದ ಹಾಗೂ ತುರ್ತು ಪರಿಸ್ಥಿತಿ ಇಂದಿರಾಗಾಂಧಿಯ ಪ್ರಮುಖ ಕಾರ್ಯಗಳಲ್ಲಿ ಒಂದು ಬಾಂಗ್ಲಾದೇಶದವರಿಗೆ ಪಾಕಿಸ್ಥಾನದವರು ಕಿರುಕುಳ ನೀಡುವ ಸಂದರ್ಭದಲ್ಲಿ ಇಂದಿರಾಗಾಂಧಿ ಭಾರತೀಯ ಸೇನೆಯ ಮೂಲಕ ಪಾಕಿಸ್ಥಾನದವರು ಮಂಡಿಯೂರುವಂತೆ ಮಾಡಿದ್ದಾರೆ. ಪಾಕಿಸ್ಥಾನದ ವಿರುದ್ದ ಕಾಂಗ್ರೆಸ್ ಹೋರಾಟ ಮಾಡಿದೆಯೇ ಹೊರತು ಪಾಕಿಸ್ಥಾನದ ಪ್ರಧಾನಿಯ ಮದುವೆಗೆ ಹೋಗಿ ಬಿರಿಯಾನಿ ತಿಂದು ಬರುವ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ. ಹೀಗಾಗಿ ಬಿಜೆಪಿ ಈ ಕುರಿತು ಸತ್ಯಾಸತ್ಯತೆ ತಿಳಿಸುವ ಕಾರ್ಯಾಗಾರ ಮಾಡಲಿ ಹೊರತು ಇತಿಹಾಸ ತಿರುಚುವ ಕೆಲಸಗಳನ್ನು ಮಾಡುವುದು ಬೇಡ. ಇಂದಿರಾಗಾಂಧಿ ಪಂಜಾಬ್ ಪ್ರತ್ಯೇಕ ರಾಜ್ಯದ ಬೇಡಿಕೆಯ ವಿರುದ್ದವಾಗಿ ಇದ್ದುದಕ್ಕಾಗಿ ಅವರ ಹತ್ಯೆಯಾಗಿತ್ತು. ಹೀಗೆ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರ ಬಗ್ಗೆ ಮಾತನಾಡುವಾಗ ವಿಶ್ವೇಶ್ವರ ಬಂಗಾರಡ್ಕ ಆತ್ಮಾವಲೋಕನ ಮಾಡಿ ಮಾತನಾಡಲಿ ಎಂದರು.