ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2022-23ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ನಡೆಯಿತು.
ಅಧ್ಯಕ್ಷರಾಗಿ ದ್ವಿತೀಯ ವಿಜ್ಞಾನ(ಪಿಸಿಎಂಸಿ) ವಿಭಾಗದ ಶ್ರೀನಿವಾಸ್ ಹೆಗ್ಡೆ, ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಪ್ರಫುಲ್ಲ ಜ್ಯೋತ್ಸ್ನಾ ನೊರೋನ್ಹಾ, ಜೊತೆ ಕಾರ್ಯದಶಿಯಾಗಿ ದ್ವಿತೀಯ ವಿಜ್ಞಾನ(ಪಿಸಿಎಂಬಿ) ವಿಭಾಗದ ರಶ್ಮಿ ಎಂ.ಡಿರವರು ಆಯ್ಕೆಯಾದರು. ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಿಂದ ಚುನಾವಣೆ ಪ್ರಕ್ರಿಯೆಯನ್ನು ಕೈಬಿಡಲಾಗಿದ್ದು, ಮೆರಿಟ್ ಆಧಾರದಲ್ಲಿ ಸರ್ವಾನುಮತದ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಡಲಾಗುತ್ತಿದೆ. ಶ್ರೀನಿವಾಸ್ ಹೆಗ್ಡೆರವರು ದರ್ಬೆ ಪಿ.ಸಿ ಪೈ ಕಂಪೌಂಡ್ ನಿವಾಸಿ ವೆಂಕಟೇಶ್ ಹೆಗ್ಡೆ ಎಂ ಹಾಗೂ ಗೀತಾ ಎಂರವರ ಪುತ್ರ. ಪ್ರಫುಲ್ಲ ಜ್ಯೋತ್ಸ್ನಾ ನೊರೋನ್ಹಾರವರು ಸಂಜಯನಗರ ನಿವಾಸಿ ಪ್ರೇಮ್ ಕುಮಾರ್ ಹಾಗೂ ವೆರೋನಿಕಾ ಕುಟಿನ್ಹಾರವರ ಪುತ್ರಿ. ರಶ್ಮಿ ಎಂ.ಡಿರವರು ಹಾಸನ ಅರಕಲಗೂಡು ನಿವಾಸಿ ದಿನೇಶ್ ಎಂ.ಕೆ ಹಾಗೂ ಜ್ಯೋತಿ ಎಂ.ಕೆರವರ ಪುತ್ರಿ. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಶಾಂತ್ ಭಟ್, ವಾಣಿಜ್ಯ ವಿಭಾಗದ ಉಪನ್ಯಾಸಕಿ ಫಿಲೋಮಿನಾ ಮೊಂತೇರೋರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.