ಪುತ್ತೂರು : ಸಹೋದರರಿಬ್ಬರಿಗೆ ನಾಲ್ಕು ಮಂದಿ ಸಹೋದರರು ಹಲ್ಲೆ ನಡೆಸಿದ ಘಟನೆ ದರ್ಬೆಯಲ್ಲಿ ನಡೆದಿದೆ. ನರಿಮೊಗರು ಗ್ರಾಮದ ಪಂಜಳ ನಿವಾಸಿ ಅಶ್ರಫ್ ಹಾಗೂ ಅವರ ಸಹೋದರ ಇಬ್ರಾಹಿಂರವರು ಹಲ್ಲೆಯಿಂದ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಪತ್ನಿ ರಮ್ಲತ್ ಹಾಗೂ ಸಹೋದರ ಇಬ್ರಾಹಿಂ ದರ್ಬೆಯಲ್ಲಿ ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆ ಕಛೇರಿಗೆ ಹೋಗಿದ್ದು ಆ ಸಮಯದಲ್ಲಿ ಅಲ್ಲಿಗೆ ಬಂದ ನನ್ನ ಸಹೋದರರಾದ ರಫೀಕ್, ನಾಸಿರ್ ದಾರಿಮಿ, ಕೌಶರ್, ಇರ್ಷಾದ್ರವರು ಸೇರಿಕೊಂಡು ನನಗೆ ಮತ್ತು ಸಹೋದರ ಇಬ್ರಾಹಿಂರವರಿಗೆ ರಾಡ್ನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು ಮಾತ್ರಲ್ಲದೆ ನನ್ನ ಹೆಂಡತಿ ರಮ್ಲತ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗಾಯಗೊಂಡ ನಮ್ಮಿಬ್ಬರನ್ನು ಪತ್ನಿ ರಮ್ಲತ್ ಅಟೋರಿಕ್ಷಾವೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರಗೆ ದಾಖಲಿಸಿರುವುದಾಗಿ ಅಶ್ರಫ್ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಹೆಂಡತಿಗೆ ಸೇರಿದ ೪೨ ಗ್ರಾಂ. ಚಿನ್ನಾಭರಣವನ್ನು ನನ್ನ ತಂಗಿಗೆ ನೀಡಿದ್ದು ಅದನ್ನು ಈವರೆಗೆ ಮರಳಿ ನೀಡದೆ ಇರುವ ಹಿನ್ನಲೆಯಲ್ಲಿ ದರ್ಬೆಯಲ್ಲಿರುವ ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆ ಕಛೇರಿಗೆ ದೂರು ನೀಡಲಾಗಿತ್ತು. ಅದರಂತೆ ಇಲಾಖೆಯವರು ನಮ್ಮನ್ನು ವಿಚಾರಣೆಗೆ ಕರೆಸಿದ್ದರು. ವಿಚಾರಣೆ ಮುಗಿಸಿ ನಾವು ಹೊರಬರುತ್ತಿದ್ದಂತೆ ಅಲ್ಲೇ ಇದ್ದ ಆರೋಪಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಶ್ರಫ್ರವರು ದೂರಿನಲ್ಲಿ ತಿಳಿಸಿದ್ದು ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.