ಉಪ್ಪಿನಂಗಡಿ: ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪಾಪುದಡ್ಕ ಎಂಬಲ್ಲಿ ನಡೆದಿದ್ದು, ಸುಮಾರು 30 ಅಡಿಯಷ್ಟು ನೀರಿನಲ್ಲಿ ತಳ ಹಿಡಿದಿದ್ದ ಮೃತದೇಹವನ್ನು ಶುಕ್ರವಾರ ಬೆಳಗ್ಗೆ ನುರಿತ ಈಜುಗಾರ, ಜೀವ ರಕ್ಷಕ ಮುಹಮ್ಮದ್ ಬಂದಾರು ಮೇಲಕ್ಕೆತ್ತಿದ್ದಾರೆ.
ಪಾಪುದಡ್ಕ ನಿವಾಸಿ ಲಕ್ಷ್ಮಣ ಗೌಡ(54) ಎಂಬವರು ನಿನ್ನೆ ಸಂಜೆ ಹುಲ್ಲು ಕೊಯ್ಯಲೆಂದು ತೆರಳಿದವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದರು. ಇವರ ಮೃತದೇಹ ಕೆರೆಯ ತಳ ಸೇರಿತ್ತು. ಈ ಬಗ್ಗೆ ಮಾಹಿತಿ ಪಡೆದ ನುರಿತ ಈಜುಗಾರ, ಮುಳುಗು ತಜ್ಞ ಮುಹಮ್ಮದ್ ಬಂದಾರು ಅವರು ಶುಕ್ರವಾರ ಬೆಳಗ್ಗೆ ಸುಮಾರು 30 ಅಡಿಯಷ್ಟು ನೀರಿದ್ದ ಕೆರೆಯಲ್ಲಿ ಮುಳುಗಿ ತಳದಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಿದರು.