ಪುತ್ತೂರು: ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಲೋಕೇಶ್ ಎಸ್.ಆರ್.ರವರು ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನದ ಫಲಕ ಸ್ವೀಕರಿಸಿದರು.
ಫಲಕ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ,ಶಾಲಾ ಶಿಕ್ಷಕರ ಕೊರತೆಯನ್ನು ನೀಗಿಸುವಲ್ಲಿ ಆದ್ಯತೆಯನ್ನು ನೀಡುತ್ತೇನೆ,ಗ್ರಾಮೀಣ ಭಾಗದ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ ಹಾಗೂ ಗಡಿಭಾಗದ ಶಾಲೆಯ ಸಮಸ್ಯೆಗಳ ಬಗೆಗೆಗೂ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದರು.
ಭ್ರಷ್ಟಾಚಾರದ ವಿರುದ್ದ ಸುದ್ದಿ ಸಮೂಹ ಸಂಸ್ಥೆಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಆಂದೋಲನದ ಬಗ್ಗೆ ಕೇಳಿದ್ದೇನೆ. ಶಿಕ್ಷಕರಿಗೆ ಇಲಾಖೆಗೆ ಸಂಬಂಧಿಸಿದ ಸೇವೆಗಳು ನಿಗದಿತ ಸಮಯದಲ್ಲಿ ದೊರೆತಾಗ ಶಿಕ್ಷಣ ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಗಳು ಉಂಟಾಗಲು ಸಾಧ್ಯವಿಲ್ಲ. ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಗೂ ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಸುದ್ದಿ ಬಿಡುಗಡೆಯ ವರದಿಗಾರ ಯತೀಶ್ ಉಪ್ಪಳಿಗೆ, ಸುದ್ದಿ ಚಾನೆಲ್ನ ನಿರೂಪಕ ಶಿವಪ್ರಸಾದ್ ರೈ ಪೆರುವಾಜೆ ಹಾಗೂ ಕ್ಯಾಮರಾಮೆನ್ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.