ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ ಹಾಲಿ ಅಧ್ಯಕ್ಷ ಅಬ್ರಹಾಂ ತಂಡ ಜಯಬೇರಿ ಅಬ್ರಹಾಂ ತಂಡಕ್ಕೆ ೬ ಸ್ಥಾನ ಹರಿಕಿರಣ್ ತಂಡಕ್ಕೆ ೧ ಸ್ಥಾನ

0

ಪುತ್ತೂರು:ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪುತ್ತೂರು ಘಟಕದ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗೆ ಜು.3ರಂದು ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಬ್ರಾಹಂರವರ ತಂಡ ಆರು ಸ್ಥಾನಗಳನ್ನು ಗಳಿಸಿ ಜಯಬೇರಿ ಬಾರಿಸಿದ್ದಾರೆ. ಹರಿಕಿರಣ್ ಕೆ.ಯವರ ತಂಡವು ಒಂದು ಸ್ಥಾನವನ್ನು ಪಡೆದುಕೊಂಡಿದೆ.
ಒಟ್ಟು 7 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಎರಡು ತಂಡಗಳ ಪೈಪೋಟಿಯಲ್ಲಿ ಹಾಲಿ ಅಧ್ಯಕ್ಷ ಅಬ್ರಾಹಂ ನೇತೃತ್ವದ ತಂಡದ ನೆಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕ ಅಬ್ರಾಹಂ ಎಸ್.ಎ-107, ಕೆಯ್ಯೂರು ಕೆಪಿಎಸ್‌ನ ವಿಜ್ಞಾನ ಶಿಕ್ಷಕ ಕೆ.ಎಸ್. ವಿನೋದ್ ಕುಮಾರ್-97, ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಶ್ಯಾಮಲಾ ಎಂ.-88, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಆಂಗ್ಲ ಭಾಷಾ ಶಿಕ್ಷಕ ವಿಜಯ ಕುಮಾರ್ ನಾಯ್ಕ-85, ಕುಂಬ್ರ ಕೆಪಿಎಸ್‌ನ ಗಣಿತ ಶಿಕ್ಷಕಿ ಮಮತಾ ಕೆ.ಎಸ್, ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲಾ ಹರಿಕಿರಣ್ ಕೆ.-81 ಹಾಗೂ ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ-70 ಮತಗಳೊಂದಿಗೆ ವಿಜಯಿಯಾಗಿದ್ದಾರೆ.
ಉಳಿದಂತೆ ಅಬ್ರಾಹಂ ತಂಡ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ಕನ್ನಡ ಶಿಕ್ಷಕ ನಾರಾಯಣ ನಾಯ್ಕ-66, ಹರಿಕಿರಣ್ ತಂಡದ ಕಬಕ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾದ ಸತ್ಯಶಂಕರ-63, ಸರ್ವೆ ಸರಕಾರಿ ಪ್ರೌಢ ಶಾಲಾ ಉದಯ ಕುಮಾರ್-63, ಪಟ್ಟೆ ಪ್ರತಿಭಾ ಪ್ರೌಢಶಾಲಾ ವಿಶ್ವನಾಥ-62, ಸುಳ್ಯಪದವು ಸರ್ವೋದಯ ಪ್ರೌಢಶಾಲಾ ಕರುಣಾಕರ-61, ಕೆಯ್ಯೂರು ಕೆ.ಪಿ.ಎಸ್‌ನ ಗಂಗಾಧರ ರೈ-56 ಹಾಗೂ ಮುಕ್ವೆ ಸರಕಾರಿ ಹಿ.ಪ್ರಾ ಶಾಲಾ ವಿಜಯ ಎಚ್.ಆರ್-54 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಪ್ರಥಮ ಬಾರಿಗೆ ಚುನಾವಣೆ:
ಪುತ್ತೂರಿನ ಸಂಘದಲ್ಲಿ ಈ ತನಕ ನಡೆದ ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿದ್ದವು. ಈ ಸಾಲಿನಲ್ಲಿ ಪ್ರಥಮ ಬಾರಿಗೆ ಚುನಾವಣೆಯ ಮೂಲಕ ನಿರ್ದೇಶಕರ ಆಯ್ಕೆ ನಡೆದಿರುತ್ತದೆ. ಹಾಲಿ ಅಧ್ಯಕ್ಷ ಅಬ್ರಹಾಂ ಹಾಗೂ ನಿರ್ದೇಶಕರ ತಂಡಕ್ಕೆ ಈ ಬಾರಿ ಹಾಲಿ ನಿರ್ದೇಶಕ ಹರಿಕಿರಣ್ ಕೊಯಿಲರವರ ತಂಡವು ಪೈಪೋಟಿ ನೀಡಿದ್ದು ಚುನಾವಣೆಯ ಮೂಲಕ ಎಲ್ಲಾ ನಿರ್ದೇಶಕರ ಆಯ್ಕೆ ನಡೆದಿರುತ್ತದೆ.

ಮೂರು ಮಂದಿ ಹೊಸಬರು:
ಜಯಗಳಿಸಿದ ನಿರ್ದೇಶಕರ ಪೈಕಿ ಅಬ್ರಾಹಂ ಎಸ್.ಎ., ಕೆ.ಎಸ್. ವಿನೋದ್ ಕುಮಾರ್, ವಿಜಯ ಕುಮಾರ್ ನಾಯ್ಕ ಹಾಗೂ ಹರಿಕಿರಣ್ ಸಂಘದ ಹಾಲಿ ನಿರ್ದೇಶಕರಾಗಿರುತ್ತಾರೆ. ಮಮತಾ ಕೆ.ಎಸ್., ಶ್ಯಾಮಲಾ ಹಾಗೂ ಲಲಿತಾ ಹೊಸದಾಗಿ ಆಯ್ಕೆಯಾಗಿರುತ್ತಾರೆ.

96.12% ಮತದಾನ:
ಮತದಾರರ ಪಟ್ಟಿಯಲ್ಲಿ ಒಟ್ಟು 171 ಮತದಾರರ ಹೆಸರು ದಾಖಲಾಗಿದ್ದರೂ ಇದರಲ್ಲಿ 16 ಮಂದಿ ಶಿಕ್ಷಕರು ಪದೋನ್ನತಿ ಹಾಗೂ ವರ್ಗಾವಣೆಗೊಂಡಿರುತ್ತಾರೆ. ಉಳಿದ 155 ಮಂದಿ ಮತದಾರರಲ್ಲಿ 149 ಮಂದಿ ಮತಚಲಾಯಿಸಿದ್ದಾರೆ. ಚಲಾವಣೆಯಾದ ಎಲ್ಲಾ ಮತಗಳು ಸಿಂಧುವಾಗಿತ್ತು.
ನೆಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ಮತದಾನ ಪ್ರಕ್ರಿಯೆಗಳು ನಡೆದಿರುತ್ತದೆ. ತಾಲೂಕಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸಹ ಶಿಕ್ಷಕರು ಈ ಚುನಾವಣೆಯಲ್ಲಿ ಮತದಾನ ಮಾಡಿದರು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ಪ್ರಕ್ರಿಯೆಗಳು ನಡೆಯಿತು. ನಂತರ ಮತ ಎಣಿಕೆ ಕಾರ್ಯಗಳು ನೆರವೇರಿತು. ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ.ಯವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here