- ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿದ್ದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಗೆ ಪ್ರಮಾಣಪತ್ರ ಹಸ್ತಾಂತರ
ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು, ಫಾದರ್ ಮುಲ್ಲರ್ ರಕ್ತನಿಧಿ ಕೇಂದ್ರ ಮಂಗಳೂರು ಮತ್ತು ಯೆನೆಪೋಯಾ ಮೆಡಿಕಲ್ ಕಾಲೇಜು ರಕ್ತನಿಧಿ ಕೇಂದ್ರ ದೇರಳಕಟ್ಟೆ ಇದರ ಸಹಯೋಗದೊಂದಿಗೆ “ಸಾಧನೆಯ ಹಾದಿಯಲ್ಲಿ ಬಿ.ಡಿ.ಎಂ ಹೆಜ್ಜೆ “ಕರಾವಳಿಯ ಚರಿತ್ರೆಯ ಪುಟಗಳಿಗೆ ಮತ್ತೊಂದು ಗರಿ” ಎಂಬ ಧ್ಯೇಯದೊಂದಿಗೆ 350ನೇ ಬೃಹತ್ ರಕ್ತದಾನ ಶಿಬಿರ ಮತ್ತು ಸನ್ಮಾನ ನಾಟೆಕಲ್ ಆರ್ ಕೆ ಸಿ ವಂಡರ್ ಸಿಟಿಯಲ್ಲಿ ನಡೆಯಿತು.
ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ರಕ್ತದ ಅವಶ್ಯಕತೆ ಬಿದ್ದಾಗ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವವರನ್ನು ಹಾಗೂ ನಿರಂತರವಾಗಿ ರಕ್ತದಾನ ಮಾಡುವವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಖ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೋವಿಡ್ ನಿಂದಾಗಿ ರಕ್ತದಾನ ಶಿಬಿರಗಳು ನಡೆಸಲು ಸಾಧ್ಯವಾಗದ ಕಾರಣದಿಂದಾಗಿ ಜಿಲ್ಲೆಯಾದ್ಯಂತ ಶೇ.100 ರಕ್ತದ ಕೊರತೆಯಾಗಿತ್ತು. 2020ರ ಸಮೀಕ್ಷೆ ಪ್ರಕಾರ ದೇಶದಲ್ಲಿ 15 ಸಾವಿರ ಯೂನಿಟ್ ರಕ್ತದ ಬೇಡಿಕೆಯಿದೆ. ದಾನಿಗಳಿಂದ 11 ಸಾವಿರ ಯೂನಿಟ್ ರಕ್ತ ಮಾತ್ರ ಸಂಗ್ರಹವಾಗಿದೆ. ಒಟ್ಟು 4 ಸಾವಿರ ಯೂನಿಟ್ ರಕ್ತದ ಕೊರತೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಯುವ ಜನತೆ ರಕ್ತದಾನ ಮಾಡುವ ಮೂಲಕ ಹಾಗೂ ರಕ್ತದಾನದ ಜಾಗೃತಿಯನ್ನು ಮೂಡಿಸುವ ಮೂಲಕ ರಕ್ತದ ಕೊರತೆಯನ್ನು ನೀಗಿಸಬೇಕಿದೆ ಎಂದು ಅವರು ಹೇಳಿದರು.
ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆರವರು ರಕ್ತದಾನ ಮಾಡಿ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆ ಜಾತಿ, ಧರ್ಮ ನೋಡದೆ ನಿರಂತರವಾಗಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತ ಒದಗಿಸುವ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿರುವುದು ಶ್ಲಾಘನಿಯ ಎಂದರು.
ಬೆಳ್ಮ ಗ್ರಾ.ಪಂ. ಅಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ, ಯೆನಪೋಯ ವಿಶ್ವ ವಿದ್ಯಾಲಯದ ಕಾರ್ಯಕ್ರಮ ಸಂಯೋಜಕಿ ಡಾ. ಅಶ್ವಿನಿ, ನಾಟೆಕಲ್ ಆರ್ ಕೆಸಿ ಸಂಸ್ಥೆಯ ನಿರ್ದೇಶಕ ಅಬ್ದುಲ್ ಅಝೀಝ್, ಬ್ಲಡ್ ಡೋನರ್ಸ್ ಮಂಗಳೂರು ಇದರ ವುಮೆನ್ಸ್ ವಿಂಗ್ ನ ಆಯಿಶಾ ಉಳ್ಳಾಲ , ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಉಪಾಧ್ಯಕ್ಷ ಅಶ್ರಫ್ ಉಪ್ಪಿನಗಂಡಿ, ಜೊತೆ ಕಾರ್ಯದರ್ಶಿ ಸಾಹುಲ್ ಹಮೀದ್ ಕಾಶಿಪಟ್ಣ, ತಾ.ಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಕಾಸರಗೋಡು ಪಂಚಾಯತ್ ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ, ಜಿ.ಪಂ ಮಾಜಿ ಸದಸ್ಯ ಮುಸ್ತಾಫ ಪಾವೂರು, ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಡಿ.ಎಂ ಮುಹಮ್ಮದ್, ಉದ್ಯಮಿ ಕೆ.ಟಿಂಬರ್ ಅಬೂಬಕ್ಕರ್, ನಾಸೀರ್ ಸಾಮಣಿಗೆ, ಕಥೋಲಿಕ್ ಸಭಾ ಉಳ್ಳಾಲ ವಲಯ ಮಾಜಿ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮದನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್ ಮಾಸ್ಟರ್, ಝಕರಿಯ್ಯಾ ಮಲಾರ್, ಹಮೀದ್ ಮಾರಿಪಳ್ಳ, ಹಕೀಂ ಮಾರಿಪಳ್ಳ, ಸುಹೇಲ್ ಕಂದಕ್, ರವೂಫ್ ಸಿ.ಎಂ, ಸಿದ್ದೀಕ್ ಉಚ್ಚಿಲ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯು ಕಳೆದ ಮಾರ್ಚ್ ತಿಂಗಳಲ್ಲಿ ನಿಫಾ ಸಂಸ್ಥೆಯ ಜೊತೆ ಕೈ ಜೋಡಿಸಿ ದಾಖಲೆಯ ರಕ್ತದಾನ ಶಿಬಿರಕ್ಕೆ ಸಹಕರಿಸಿದಕ್ಕಾಗಿ ಸಂಸ್ಥೆಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿತ್ತು. ಇದರ ಸರ್ಟಿಫಿಕೇಟ್ ಅನ್ನು ಕಾರ್ಯಕ್ರಮದಲ್ಲಿ ಡಾ. ಅಶ್ವಿನಿ ಶೆಟ್ಟಿ ಅವರಿಂದ ಸ್ವೀಕರಿಸಲಾಯಿತು.
ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರ.ಕಾರ್ಯದರ್ಶಿ ನವಾಝ್ ಕಲ್ಲರಕೋಡಿ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಕೋಶಾಧಿಕಾರಿ ಹಮೀದ್ ಪಜೀರ್ ಸ್ವಾಗತಿಸದರು. ಕಾರ್ಯನಿವಾಹಕ ಝಹೀರ್ ಶಾಂತಿನಗರ ವಂದಿಸಿದರು. ರಫೀಝ್ ಮೂಡಬಿದ್ರೆ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ದಾನಿಗಳಿಂದ 358 ಯುನಿಟ್ ರಕ್ತ ಸಂಗ್ರಹಿಸಲಾಯಿತು.