ಪುತ್ತೂರು ನಗರಸಭೆ ಕಾರ್ಯಾಲಯದ ಆವರಣದಲ್ಲಿ ಹರ್ಷಾಚರಣೆ
ಪುತ್ತೂರು: ಪೌರ ಕಾರ್ಮಿಕರನ್ನು ಗುತ್ತಿಗೆ ಪದ್ಧತಿ ಬದಲು ನೇರ ವೇತನಕ್ಕೆ ಒಳಪಡಿಸುವುದು, ಪೌರ ಕಾರ್ಮಿಕರ ಕೆಲಸ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ರಾಜ್ಯ ಸರಕಾರ ಲಿಖಿತರೂಪದಲ್ಲಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಿಂಪಡೆದ ಪೌರ ಕಾರ್ಮಿಕರು ಜು. 5ರಂದು ಬೆಳಿಗ್ಗೆ ಎಂದಿನಂತೆ ಸ್ವಚ್ಛತಾ ಕಾರ್ಯಗಳಿಗೆ ತೆರಳುವ ಮುನ್ನ ಪಟಾಕಿ ಸಿಡಿಸಿ ಹರ್ಷಾಚರಣೆ ಮಾಡಿದರು.
ಕಳೆದ ನಾಲ್ಕು ದಿನಗಳಿಂದ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಪುತ್ತೂರು ನಗರಸಭೆಯ ಪೌರ ಕಾರ್ಮಿಕರು ಮಂಗಳೂರಿನಲ್ಲಿ ನಡೆಯುತ್ತಿದ್ದ ಮುಷ್ಕರದಲ್ಲಿ ಭಾಗವಹಿಸಿದ್ದರು. ಪೌರ ಕಾರ್ಮಿಕರ ಮುಷ್ಕರ ಸಂಬಂಧ ಆರಂಭದಲ್ಲಿ ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಲಿಖಿತ ರೂಪದಲ್ಲಿ ಭರವಸೆ ನೀಡಿಲ್ಲ ಎಂದು ಪೌರ ಕಾರ್ಮಿಕರು ಮುಷ್ಕರ ಮುಂದುವರಿಸಿದ್ದರು. ಜು.4ರಂದು ಮುಖ್ಯಮಂತ್ರಿಯವರು ಲಿಖಿತ ಭರವಸೆ ನೀಡಿದ್ದರಿಂದ ಪೌರ ಕಾರ್ಮಿಕರು ಮುಷ್ಕರ ಹಿಂಪಡೆದರು. ಈ ಹಿನ್ನೆಲೆಯಲ್ಲಿ ಜು. 5ರಂದು ಬೆಳಿಗ್ಗೆ ಪೌರ ಕಾರ್ಮಿಕರು ನಗರಸಭೆ ಕಾರ್ಯಾಲಯದ ಆವರಣದಲ್ಲಿ ಪಟಾಕಿ ಸಿಡಿಸಿ ಹರ್ಷಾಚರಣೆ ವ್ಯಕ್ತಪಡಿಸಿದರು. ಇದರೆ ಜೊತೆಗೆ ಪೌರ ಕಾರ್ಮಿಕರಿಗೆ ಸಹಕಾರ ನೀಡಿದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ಪೌರಾಯುಕ್ತ ಮಧು ಎಸ್ ಮನೋಹರ್, ಪೌರ ಕಾರ್ಮಿಕರ ಸಂಘ ಮತ್ತು ಗುತ್ತಿಗೆ ನೌಕರರ ಸಂಘದ ಕರಾವಳಿ ಭಾಗದ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ಅವರನ್ನು ಅಭಿನಂದಿಸಿದರು.