ಪುತ್ತೂರು: ದಕ್ಷಿಣ ಆಫ್ರಿಕಾದ ಗೇರು ಬೆಳೆಗಾರರ ಸಂಘದ ಪ್ರತಿನಿಧಿಗಳು ಮತ್ತು ಸಂಸ್ಕರಣ ಉದ್ಯಮಿಗಳು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ (ಡಿಸಿಆರ್) ಭಾಗೀದಾರಿತ್ವ ಪ್ರಾತ್ಯಕ್ಷಿಕೆ ಗೇರು ತೋಟವಾದ ಸಿರಿಕಡಮಜಲು ಸ್ವೇದಬಿಂದು ಗೇರು ತೋಟವನ್ನು ಸಂದರ್ಶಿಸಿದರು.
ಐಸಿಎಆರ್ ಡಿಸಿಆರ್ ಐಎಂಸಿ ಮೆಂಬರ್ ಹಾಗೂ ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಕೋಶಾಧಿಕಾರಿ ಕಡಮಜಲು ಸುಭಾಸ್ ರೈಯವರೊಡನೆ ದ.ಆಫ್ರಿಕಾ ಪ್ರತಿನಿಧಿಗಳು ಮಾತುಕತೆ ನಡೆಸಿ ಮಾಹಿತಿ ವಿನಿಯಮ ಮಾಡಿಕೊಂಡರು. ಪಶ್ಚಿಮ ಆಫ್ರಿಕಾದ ಬುರ್ಕಿನ್ ದೇಶವು ವಿಶ್ವದಲ್ಲಿಯೇ ಅತೀ ಹೆಚ್ಚು ಸಾಂಪ್ರದಾಯಿಕವಾಗಿ ಕಚ್ಚಾಗೇರು ಬೆಳೆದು ವಿದೇಶಗಳಿಗೆ ರಫ್ತುಮಾಡುವ ದೇಶವಾಗಿದೆ. ಅಲ್ಲಿ ಗೇರು ಬೆಳೆಯನ್ನು ವೈಜ್ಞಾನಿಕವಾಗಿ ಹೇಗೆ ಮಾಡಬಹುದೆಂಬುದನ್ನು ಭಾರತದ ಅದರಲ್ಲಿಯೂ ದಕ್ಷಿಣ ಭಾರತದ ಗೇರು ಬೆಳೆಯನ್ನು ಅಧ್ಯಯನ ಪ್ರಾತ್ಯಕ್ಷಿಕೆಗೆ ಬಳಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ದ.ಆಫ್ರಿಕಾದ ಸೆರಕ್ ಗ್ಲೋಬಲ್ ಕಂಪೆನಿಯ ಅನಿವಾಸಿ ಭಾರತೀಯ ಸುಶಾಂತ್ ದಹಿಯಾ, ದಕ್ಷಿಣ ಆಫ್ರಿಕಾದ ವಿವಿಧ ಉದ್ಯಮಿಗಳಾದ ಯಾಕೋಬ ಝೌಂಡಿ, ಮಾಥ್ಯೂ ಬೇಡಿಯಲ್, ಹೆರ್ವೆ ಟ್ರಾವೊರೆ, ಇಬ್ರಾಹಿಂ ಸಂಫೊ ಭೇಟಿ ನೀಡಿ ಸಮಗ್ರ ಗೇರು ಕೃಷಿ ದರ್ಶನ ಮಾಡಿದರು. ಪ್ರೀತಿ ಎಸ್. ರೈ ಸತ್ಕರಿಸಿದರು.