ನಿಡ್ಪಳ್ಳಿ; ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಜು.5 ರಂದು ನಿಡ್ಪಳ್ಳಿ ಗ್ರಾಮದ ಕೂಟೇಲು ಪರಿಸರ ಎರಡನೇ ಬಾರಿ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು ಜನ ಕೃಷಿ ನಾಶದ ಭೀತಿಯಲ್ಲಿದ್ದಾರೆ. ಜೂ.30 ರಂದು ಸುರಿದ ಭಾರಿ ಮಳೆಗೆ ಮೊದಲ ಬಾರಿ ಮುಳುಗಡೆಯಾಗಿತ್ತು.
ಕೂಟೇಲು ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು ಸೇತುವೆಗೆ ಕಾಂಕ್ರೀಟ್ ಹಾಕಲು ಹಲಗೆ ಮತ್ತು ಕಬ್ಬಿಣ ಜೋಡಿಸಲು ಅಡಿಗೆ ಕಂಬ ಹಾಕಿದ್ದು ನೀರು ಹರಿಯಲು ಅವಕಾಶ ಇಲ್ಲದಿರುವುದರಿಂದ ಪಕ್ಕದ ತೋಟಗಳಿಗೆ ನುಗ್ಗಿ ಇಡೀ ಪರಿಸರ ನೀರಿನಿಂದ ಅವೃತವಾಗಿದೆ. ಅಲ್ಲದೆ ಅಲ್ಲಿ ರಾಶಿ ಹಾಕಿದ ಮಣ್ಣು ತೆಗೆಯದೆ ಇರುವುದರಿಂದಲೂ ತೋಟಗಳಿಗೆ ನೀರು ನುಗ್ಗಲು ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಕೂಟೇಲು ಪರಿಸರದ ಸುಮಾರು ಆರು ಜನರ ತೋಟ ಕೆಂಪು ನೀರಿನಿಂದ ತುಂಬಿದ್ದು ಅಡಿಕೆ, ತೆಂಗು, ಕಾಳುಮೆಣಸು, ಬಾಳೆ ಮತ್ತು ಗದ್ದೆ ಕೃಷಿ ನಾಶವಾಗುವ ಸಂಭವ ಇದೆ. ಕಳೆದ ಬಾರಿಗಿಂತ ಈ ಸಲ ಹೆಚ್ಚು ನೀರು ತುಂಬಿದೆ ಎಂದು ಸ್ಥಳೀಯರಾದ ಕೇಶವ ನಾಯ್ಕ ಕೂಟೇಲು ತಿಳಿಸಿದ್ದಾರೆ.