ವಿಟ್ಲ: ಮಳೆಯ ಹಿನ್ನೆಲೆಯಲ್ಲಿ ಸಾಲೆತ್ತೂರು – ವಿಟ್ಲ ರಸ್ತೆಯ ಕುಡ್ತಮುಗೇರು ಎಂಬಲ್ಲಿ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪಕ್ಕದ ರಸ್ತೆ ಜಲಾವೃತವಾಗಿ ವಾಹನ ಸಂಚಾರ ಸ್ಥಗಿತವಾಗಿತ್ತು.
ಸ್ಥಳೀಯ ನಿವಾಸಿಗಳು ರಸ್ತೆಯ ಎರಡೂ ಬದಿಯಲ್ಲಿ ನಿಂತು ನೀರಿನಿಂದ ಆವೃತವಾದ ರಸ್ತೆಯಲ್ಲಿ ವಾಹನಗಳನ್ನು ತೆರಳದಂತೆ ತಡೆಯುತ್ತಿದ್ದರು ಮಾತ್ರವಲ್ಲದೆ ಮುನ್ನೆಚ್ಚರಿಕೆಯನ್ನು ವಹಿಸುತ್ತಿದ್ದರು. ಇದೇ ವೇಳೆ ಮಣಿಪಾಲದಿಂದ ಸಾಲೆತ್ತೂರು ಮೂಲಕ ವಿಟ್ಲಕ್ಕೆ ತೆರಳುವ ಖಾಸಗಿ ಬಸ್ಸೊಂದು ಬಂದಿದ್ದು, ಅದರ ಚಾಲಕ ಆ ದಾರಿಯಾಗಿ ಹಾರನ್ ಹೊಡೆಯುತ್ತಾ ಬಂದಿದ್ದರು. ಇನ್ನೊಂದು ಕಡೆಯಲ್ಲಿದ್ದ ಯುವಕರ ತಂಡ ಬಸ್ ಆ ಕಡೆಗೆ ತೆರಳದಂತೆ ಸೂಚಿಸಿದ್ದರು ಮಾತ್ರವಲ್ಲದೆ ಅಪಾಯದ ಕುರಿತು ತಿಳಿಸಿದ್ದರು. ಆದರೆ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳದ ಚಾಲಕ ಬಸ್ಸಿನ ತುಂಬೆಲ್ಲಾ ಪ್ರಯಾಣಿಕರು ಇದ್ದರೂ ನೀರಿನಿಂದ ಆವೃತವಾದ ರಸ್ತೆಯಲ್ಲಿ ಬಸ್ಸನ್ನು ಚಲಾಯಿಸಿಕೊಂಡು ಹೋದರು. ಅಲ್ಪ ದೂರ ಸಾಗುತ್ತಿದ್ದಂತೆ ಬಸ್ಸು ಮುಂದೆ ಚಲಿಸಲಾರದೆ ನಡುನೀರಿನಲ್ಲಿ ಉಳಿದುಕೊಂಡಿತು. ಬಳಿಕ ಸ್ಥಳೀಯರೆಲ್ಲಾ ದೂಡಿ ಬಸ್ಸನ್ನು ಬದಿಗೆ ಸರಿಸಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬಸ್ಸು ಚಾಲಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲದೆ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಾಗರೀಕರು ಒತ್ತಾಯಿಸಿದ್ದಾರೆ.