ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ವತಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಿರುವ ನೇತ್ರಾವತಿ ನದಿಯ ಸೇತುವೆಯನ್ನು ಸ್ವಚ್ಛಗೊಳಿಸಲಾಯಿತು.
ಸೇತುವೆಯ ಮೇಲ್ಭಾಗದ ಹೆದ್ದಾರಿ ಬದಿ ಕೆಸರು ತುಂಬಿ ಅದರಲ್ಲಿ ಹುಲ್ಲು ಬೆಳೆದಿತ್ತು. ಇದರಿಂದ ಸೇತುವೆಯ ಎರಡೂ ಬದಿಯಲ್ಲಿ ನೀರಿಳಿಯಲು ಇರುವ ರಂಧ್ರಗಳು ಮುಚ್ಚಿ ಹೋಗಿ ಮಳೆಗಾಲದಲ್ಲಿ ಸೇತುವೆ ಮೇಲೆಯೇ ನೀರು ನಿಲ್ಲುವಂತಾಗಿತ್ತು. ಇದರಿಂದ ಘನ ವಾಹನಗಳು ಹೋಗುವಾಗ ಪಾದಚಾರಿಗಳು, ದ್ವಿಚಕ್ರ ಸವಾರರ ಮೇಲೆ ನೀರು ಪ್ರೋಕ್ಷಣೆಯಾಗುತ್ತಿತ್ತು. ಇಲ್ಲಿನ ಸಮಸ್ಯೆಯನ್ನು ಅರಿತ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದ ಸದಸ್ಯರು ಶ್ರಮದಾನದ ಮೂಲಕ ಸೇತುವೆಯ ಮೇಲ್ಭಾಗದ ಎರಡೂ ಬದಿಗಳನ್ನೂ ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ರಂಧ್ರಗಳನ್ನು ಬಿಡಿಸಿ ಕೊಟ್ಟರು.
ಈ ಸ್ವಚ್ಛತಾ ಶ್ರಮದಾನದಲ್ಲಿ ಸಂಘದ ಅಧ್ಯಕ್ಷ ನರಸಿಂಹ ಶೆಟ್ಟಿ ಕಜೆಕ್ಕಾರು, ಉಪಾಧ್ಯಕ್ಷ ಖಲಂದರ್ ಶಾಫಿ, ಪ್ರಧಾನ ಕಾರ್ಯದರ್ಶಿಯಾದ ಫಾರೂಕ್ ಝಿಂದಗಿ, ಜೊತೆ ಕಾರ್ಯದರ್ಶಿ ಅಶೋಕ್ ಬಂಡಾಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ರಾದ ಹೇಮಂತ್ ಕುಮಾರ್ ಮೈತ್ತಳಿಕೆ, ಆಸೀಫ್ ಕೊಯಿಲ, ಝಕಾರಿಯ ಮೊಯ್ಲಾರ್ ಆತೂರು, ಅಶ್ರಪ್ ಪಿಲಿಗೂಡು, ಫಾರೂಕ್ ಜೋಗಿಬೆಟ್ಟು, ಹಮೀದ್ ಪೆರಿಯಡ್ಕ ಮತ್ತಿತರರು ಭಾಗವಹಿಸಿದರು.