ಉಪ್ಪಿನಂಗಡಿ: ಈ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮೈದುಂಬಿ ಹರಿಯುತ್ತಿರುವ ಕುಮಾರಧಾರ- ನೇತ್ರಾವತಿ ನದಿಗಳು ನೆರೆ ಭೀತಿಯನ್ನು ಹುಟ್ಟು ಹಾಕಿವೆ. ಕುಮಾರಧಾರ- ನೇತ್ರಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.
ಮಂಗಳವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗೆ ತನಕ ಉಪ್ಪಿನಂಗಡಿಯಲ್ಲಿ 118.6 ಮೀ.ಮೀ. ಮಳೆಯಾಗಿದ್ದು, ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಸಂಜೆಯಾಗುತ್ತಲೇ ಆರೂವರೆ ಮೆಟ್ಟಿಲುಗಳಷ್ಟೇ ಕಾಣುತ್ತಿದ್ದು, ಉಳಿದ ಮೆಟ್ಟಿಲುಗಳೆಲ್ಲಾ ಮುಳುಗಿವೆ. ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ 29.0 ಮೀ. ನೀರಿನ ಪ್ರಮಾಣ ದಾಖಲಾಗಿದ್ದು, ಇದರ ಅಪಾಯದ ಮಟ್ಟ 30 ಮೀ. ಆಗಿದೆ.
ತಹಶೀಲ್ದಾರ್ ಭೇಟಿ: ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಉಪ್ಪಿನಂಗಡಿಗೆ ಆಗಮಿಸಿ, ನದಿ ನೀರಿನ ಪರಿಶೀಲನೆ ನಡೆಸಿದರಲ್ಲದೆ, ಗೃಹ ರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದ ರಬ್ಬರ್ ಬೋಟ್ ನಲ್ಲಿ ಸಂಚರಿಸಿ, ಬೋಟ್ನ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ರಂಜನ್, ಗ್ರಾಮಕರಣಿಕ ಜಿತೇಶ್ ವಿ., ಗ್ರಾಮ ಸಹಾಯಕ ಯತೀಶ್, ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್, ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಗೃಹರಕ್ಷಕರಾದ ಸಮದ್, ಪ್ರಶಾಂತ್, ಈಜುಗಾರರಾದ ಸುದರ್ಶನ್ ನೆಕ್ಕಿಲಾಡಿ, ವಿಶ್ವನಾಥ್, ಮುಹಮ್ಮದ್ ಬಂದಾರು ಇದ್ದರು.