ಉಪ್ಪಿನಂಗಡಿ: ಎಡೆಬಿಡದೆ ಸುರಿಯುತ್ತಿದ್ದ ಮಳೆಯು ಶುಕ್ರವಾರ ಕೊಂಚ ಬಿಡುವು ಪಡೆದಿದ್ದು, ನೇತ್ರಾವತಿ ಹಾಗೂ ಕುಮಾರಧಾರ ನದಿ ನೀರಿನಲ್ಲಿಯೂ ಇಳಿಕೆ ಕಂಡು ಬಂದಿದೆ.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಈಗ 14 ಮೆಟ್ಟಿಲುಗಳು ಕಾಣುತ್ತಿದ್ದು, ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ ನೀರು 27.05 ಮೀಟರ್ಗೆ ಇಳಿದಿದೆ. ಗುರುವಾರ ಬೆಳಗ್ಗಿನಿಂದ ಶುಕ್ರವಾರ ಬೆಳಗ್ಗಿನ ತನಕ ಉಪ್ಪಿನಂಗಡಿಯಲ್ಲಿ 94.6 ಮಿ.ಮೀ. ಮಳೆಯಾಗಿದೆ. ನದಿಯಲ್ಲಿ ನೀರಿನ ಮಟ್ಟ ಇಳಿದಿದ್ದರಿಂದ ಕಳೆದ ಕೆಲ ದಿನಗಳಿಂದ ನೆರೆಯ ಭೀತಿಯಲ್ಲಿದ್ದ ಇಲ್ಲಿನ ನದಿ ಪಾತ್ರದ ಜನತೆ ಕೊಂಚ ನಿರಾಳರಾಗುವಂತಾಗಿದೆ.
ಧರೆ ಕುಸಿತ:
ಹಿರೇಬಂಡಾಡಿ ಗ್ರಾಮದ ನಿವಾಸಿ ಹರಿಶ್ಚಂದ್ರ ಎಂಬವರ ಮನೆಯ ಬದಿಯ ಧರೆ ಕುಸಿದು ಮನೆಗೆ ಅಪಾಯ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ ಶೆಟ್ಟಿ ಕಾರ್ಯದರ್ಶಿ ಪರಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಸತೀಶ್ ಎನ್ನಾಳ, ಪ್ರಮುಖರಾದ ಉಮನಾಥ ಶೆಟ್ಟಿ ಪೆರ್ನೆ, ರವೀಂದ್ರ ಪಟಾರ್ತಿ ಉಪಸ್ಥಿತರಿದ್ದರು.