- ಚದುರಂಗ ಉತ್ತಮ ಜೀವನಶೈಲಿಯನ್ನು ರೂಪಿಸುತ್ತದೆ: ಸುದರ್ಶನ್ ಕುಮಾರ್
ಪುತ್ತೂರು: ಚದುರಂಗ ಆಟ ಹಾಗೂ ಮಾನವ ಜೀವನ ಶೈಲಿಗೆ ತುಂಬಾ ಹೋಲಿಕೆ ಇದೆ. ಒಮ್ಮೆ ಚದುರಂಗ ಆಡಲು ಆರಂಭಿಸಿದರೆ, ಉತ್ತಮ ಜೀವನಶೈಲಿಯನ್ನು ಚತುರಂಗ ಆಟವೇ ರೂಪಿಸುತ್ತದೆ. ಚದುರಂಗ ಆಟದಲ್ಲಿ ರಾಜನ ಪಾತ್ರ ಪ್ರಮುಖವಾಗಿದ್ದರೂ ಕೂಡ ರಾಣಿಯ ಪಾತ್ರವು ಜೊತೆಗಿದ್ದರೆ ಹೆಚ್ಚು ಬಲ. ಅಂತೆಯೇ ನಮ್ಮ ಜೀವನದಲ್ಲಿಯೂ ಪುರುಷರ ಪ್ರತಿಯೊಂದು ಯಶಸ್ಸಿನ ಹಿಂದೆಯೂ ಮಹಿಳೆಯರು ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ನ್ಯಾಯವಾದಿ ಸುದರ್ಶನ್ ಕುಮಾರ್ ಹೇಳಿದರು.
ಇವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ 41ನೇ ಮಾನ್ಸೂನ್ ಚೆಸ್ ಟೂರ್ನಮೆಂಟನ್ನು ಉದ್ಘಾಟಿಸಿ ಮಾತನಾಡಿದ ಇವರು, ಚದುರಂಗ ಸ್ಪರ್ಧೆಯು ನಮ್ಮೊಳಗೆ ಏಕಾಗ್ರತೆಯನ್ನು ಹೆಚ್ಚಿಸಲು ಬಹಳಷ್ಟು ಸಹಾಯವಾಗುತ್ತದೆ . ಹಾಗಾಗಿ ಕ್ರೀಡಾಳುಗಳು ನಿತ್ಯವೂ ಚೆಸ್ ಆಡಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುರಿತು ಮಾತನಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಶ್ರೀನಿವಾಸ ಸಾಮಂತ, ಚದುರಂಗದ ಆಟಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರಾಚೀನ ಕಾಲದಲ್ಲಿ ರಾಜರುಗಳು ಸೇರಿಕೊಂಡು ಆಟವನ್ನು ಆಡುತ್ತಿದ್ದರು. ನಂತರ ಅಂತರಾಷ್ಟ್ರೀಯ ಚೆಸ್ ಪಟು ವಿಶ್ವನಾಥ್ ಆನಂದ್ ರಿಂದಾಗಿ ಈ ಆಟವು ಮತ್ತಷ್ಟು ಪ್ರಚಲಿತವಾಯಿತು. ಪ್ರಸ್ತುತ ಭಾರತ ದೇಶಕ್ಕೆ ಚೆಸ್ ಕ್ರೀಡೆಯಲ್ಲಿ ನಾಲ್ಕನೇಯ ಸ್ಥಾನಮಾನವನ್ನು ಗಳಿಸಿದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವನ್ನು ಆಡಿ ದೇಶವನ್ನು ಮೊದಲನೆಯ ಸ್ಥಾನಕ್ಕೆ ತರಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ ಚದುರಂಗದ ಆಟವನ್ನು ಆಡುತ್ತಿದ್ದಂತೆ ಏಕಾಗ್ರತೆಯು ಹೆಚ್ಚುತ್ತದೆ ಮತ್ತು ಇದು ಒಂದು ಮೆದುಳಿನ ಆಟವೆಂದೇ ಹೇಳಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸ್ಸಿ ಸಂಯೋಜಕರಾದ ಪ್ರೊ. ಶಿವಪ್ರಸಾದ್ ಕೆ ಎಸ್, ಹಾಗೂ ಮಂಗಳೂರಿನ ಡೆರಿಕ್ ಚೆಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡೆರಿಕ್ ಪಿಂಟೋ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾ ಪ್ರಾರ್ಥಿಸಿದರು . ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಜ್ಯೋತಿ ಕುಮಾರಿ ವಂದಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ. ಪಿ ಆರ್ ನಿಡ್ಪಳ್ಳಿ ನಿರೂಪಿಸಿದರು.