ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು ಉಪ್ಪಿನಂಗಡಿಯಲ್ಲಿ ನೆರೆ ಭೀತಿ

0

ಉಪ್ಪಿನಂಗಡಿ: ಶಾಂತಗೊಂಡಿದ್ದ ನೇತ್ರಾವತಿ- ಕುಮಾರಧಾರ ನದಿಗಳು ಮತ್ತೆ ರೌದ್ರವತಾರ ತಾಳುವ ಲಕ್ಷಣಗಳು ಕಾಣುತ್ತಿದ್ದು, ಭಾನುವಾರ ನಸುಕಿನ ಜಾವದಿಂದಲೇ ಉಭಯ ನದಿಗಳಲ್ಲಿ ನೀರ ಹರಿವು ಹೆಚ್ಚಳಗೊಂಡಿದ್ದು, ಅಪಾಯದ ಮಟ್ಟ ತಲುಪಿದೆ.

ಈಗಾಗಲೇ ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ. ಉಭಯ ನದಿಗಳಲ್ಲಿ ನೀರು ಹೆಚ್ಚಳವಾಗುತ್ತಲೇ ಇದ್ದು ೨೦೧೯ರ ಬಳಿಕ ಮತ್ತೊಮ್ಮೆ ನೆರೆ ಬರುವ ಸಾಧ್ಯತೆ ಕಾಣಿಸಿಕೊಂಡಿದೆ.
ಕಳೆದ ಕೆಲವು ದಿನಗಳಲ್ಲಿ ನೆರೆ ಭೀತಿ ಮೂಡಿಸಿದ ನೇತ್ರಾವತಿ- ಕುಮಾರಧಾರ ನದಿಗಳು ಶನಿವಾರ ಶಾಂತಗೊಂಡಿದ್ದವು.

ಉಭಯ ನದಿಗಳಲ್ಲಿ ನೀರ ಹರಿವು ತೀರಾ ಕಡಿಮೆಯಾಗಿತ್ತು. ಆದರೆ ಶನಿವಾರ ಸಂಜೆಯಾಗುತ್ತಲೇ ನೀರು ಏರಿಕೆಯಾಗುತ್ತಲೇ ಇದ್ದು, ಭಾನುವಾರ ನಸುಕಿನ ಜಾವ ಎರಡು ಗಂಟೆಯ ಬಳಿಕ ಅಪಾಯದ ಮಟ್ಟದಲ್ಲಿ ಉಭಯ ನದಿಗಳ ನೀರು ಹರಿಯುತ್ತಿದೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಇರುವ ೩೮ ಮೆಟ್ಟಿಲುಗಳಲ್ಲಿ ಈ ಒಂದು ಮೆಟ್ಟಿಲಷ್ಟೇ ಕಾಣುತ್ತಿದ್ದು, ಉಳಿದ ಮೆಟ್ಟಿಲುಗಳೆಲ್ಲಾ ಮುಳುಗಿವೆ. ಈ ಒಂದು ಮೆಟ್ಟಿಲು ಮುಳುಗಿದರೆ ನೀರು ದೇವಾಲಯದ ವಠಾರಕ್ಕೆ ಪ್ರವೇಶಿಸಲಿದೆ. ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ ನದಿಗಳ ಅಪಾಯದ ಮಟ್ಟ ೩೦ ಮೀ. ಆಗಿದ್ದು, ನದಿ ನೀರು ಈ ಮಟ್ಟವನ್ನು ಇದೀಗ ತಲುಪಿದೆ.

ಅಪಾಯದ ಮಟ್ಟ ಮೀರಿ ನದಿಗಳು ಹರಿದಾಗ ಇಲ್ಲಿನ ಪಂಜಳ, ಹಿರ್ತಡ್ಕ -ಮಠ, ಹಳೆಗೇಟು, ಕೂಟೇಲು, ಕಡವಿನ ಬಾಗಿಲು, ದೇವಸ್ಥಾನ ಹೀಗೆ ನದಿ ಪಾತ್ರದ ಪ್ರದೇಶಗಳಲ್ಲದೆ, ನದಿಯನ್ನು ಸಂಪರ್ಕಿಸುವ ತೋಡುಗಳ ಬಳಿಯಿರುವ ಪ್ರದೇಶಗಳೂ ಸಂಪೂರ್ಣ ಜಲಾವೃತಗೊಳ್ಳುತ್ತವೆ. ಅಪಾಯದ ಭೀತಿಯನ್ನು ತಂದೊಡ್ಡುತ್ತವೆ.
ಸಂಗಮ ಸಾಧ್ಯತೆ: ಉಭಯ ನದಿಗಳ ನೀರು ಇನ್ನಷ್ಟು ಹೆಚ್ಚಳಗೊಂಡು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಎಡ ಹಾಗೂ ಬಲ ಬದಿಯಿಂದ ಬಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಅಂಗಣಕ್ಕೆ ಹೊಕ್ಕು ಅಲ್ಲಿನ ಧ್ವಜ ಸ್ತಂಭವನ್ನು ಸ್ಪರ್ಶಿಸಿದಾಗ ಪವಿತ್ರ ಸಂಗಮ ಘಟಿಸುತ್ತದೆ. ಹೀಗೆ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಲೇ ಸಾಗಿದರೆ ಈ ಬಾರಿ ಪವಿತ್ರ ಸಂಗಮ ಘಟಿಸುವ ಸಾಧ್ಯತೆಯೂ ಇದೆ.
ಹಳೆಗೇಟು ಬಳಿ ಮನೆಯೊಂದು ಜಲಾವೃತಗೊಳ್ಳುವ ಸಾಧ್ಯತೆಯಲ್ಲಿದ್ದು, ಸ್ಥಳಕ್ಕೆ ಕಂದಾಯಾಧಿಕಾರಿಗಳ ತಂಡ ಭೇಟಿ ನೀಡಿ, ಅವರನ್ನು ಸುರಕ್ಷಿತ ಜಾಗಕ್ಕೆ ಅಥವಾ ಜಿಲ್ಲಾಡಳಿತದ ಕಾಳಜಿ ಕೇಂದ್ರಕ್ಕೆ ತೆರಳಲು ಸೂಚಿಸಿದ್ದಾರೆ. ಗೃಹ ರಕ್ಷಕ ದಳದ ಪ್ರಾಕೃತಿಕ ವಿಕೋಪ ರಕ್ಷಣಾ ತಂಡ ಸನ್ನದ್ಧ ಸ್ಥಿತಿಯಲ್ಲಿದ್ದು, ದೇವಾಲಯದ ಬಳಿ ಬೀಡು ಬಿಟ್ಟಿದೆ.

LEAVE A REPLY

Please enter your comment!
Please enter your name here