ಪುತ್ತೂರು: ಎಡೆಬಿಡದೆ ಸುರಿದ ಮಳೆಗೆ ಮನೆಯ ಪಕ್ಕದ ತೋಡಿಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ ತಡೆಗೋಡೆ ಕುಸಿದು ಮನೆ ಅಪಾಯಕಾರಿಯಲ್ಲಿರುವ ಘಟನೆ ಜು.10ರಂದು ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಬಳಿ ನಡೆದಿದೆ.
ಬಪ್ಪಳಿಗೆ ಎನ್. ಶೆಟ್ಟಿ ಕಾಂಪೌಂಡ್ ನಿವಾಸಿ ನಾರಾಯಣ ಶೆಟ್ಟಿಯವರ ಮನೆ ಪಕ್ಕದಲ್ಲಿ ಹರಿಯುವ ಸಣ್ಣ ತೋಡಿಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದ್ದ ತಡೆಗೋಡೆಯು ಮನೆ ಗೋಡೆಯ ಅಂಚಿನ ತನಕ ಕುಸಿದಿದೆ. ಇದರಿಂದಾಗಿ ಮನೆ ಪಕ್ಕದಲ್ಲೇ ಎರಡು ತೆಂಗಿನ ಮರಗಳಿದ್ದು ಇನ್ನೂ ಕುಸಿದರೆ ತೆಂಗಿನ ಮರವು ಬುಡ ಸಹಿತ ಬೀಳುವ ಸಾಧ್ಯತೆಯಿದೆ. ತೆಂಗಿನ ಮರ ಬಿದ್ದರೆ ವಿದ್ಯುತ್ ಎಚ್.ಟಿ ಲೈನ್ ಮೇಲೆ ಬೀಳುವ ಸಾಧ್ಯತೆಗಳಿವೆ. ತಡೆಗೋಡೆ ಕುಸಿದ ಪರಿಣಾಮ ಅವರ ಮನೆಗೆ ತೆರಳುವ ಸಣ್ಣ ಸೇತುವೆ ಕುಸಿಯು ಸ್ಥಿತಿಯಲ್ಲಿದೆ.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಲೈನ್ನ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿರುವ ತೆಂಗಿನ ಮರದ ಬಗ್ಗೆ ಮಾಹಿತಿ ನೀಡಿ ಮರ ತೆರಳುಗೊಳಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಗರ ಸಭಾ ಸಿಬಂದಿ ಅಮಿತ್ ಉಪಸ್ಥಿತರಿದ್ದರು.