ನ್ಯೂನ್ಯತೆಯನ್ನು ಧನಾತ್ಮಕವಾಗಿ ಪರಿವರ್ತಿಸಿ
ಪುತ್ತೂರು: ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ, ಬೊಳುವಾರು ವಿಶ್ವಕರ್ಮ ಯುವ ಸಮಾಜದ ವಾರ್ಷಿಕ ಮಹಾಸಭೆ ಜು.10ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿದ್ದ ಎಸ್ಕೆಜಿಐ ಕೋ ಆಪರೇಟಿವ್ ಸೊಸೈಟಿಯ ಮಂಗಳೂರು ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ ಮಾತನಾಡಿ, 35 ವರ್ಷಗಳ ಹಿಂದೆ ವಿಶ್ವಕರ್ಮ ಸಮಾಜದ ಒಳಿತಿಗಾಗಿ ಈ ಸಂಘವನ್ನು ನಮ್ಮ ಹಿರಿಯರು ಅಸ್ತಿತ್ವಕ್ಕೆ ತಂದರು. ಅಂದರೆ ಸಮಾಜದ ಬಗ್ಗೆ ಅವರಿಗಿದ್ದ ಕಳಕಳಿ, ಮುಂದಾಲೋಚನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ನ್ಯೂನ್ಯತೆಗಳಿದ್ದರೂ ಬದುಕಿನಲ್ಲಿ ಸಾಧನೆ ಹಾದಿಯಲ್ಲಿ ಕ್ರಮಿಸುವುದು ದೊಡ್ಡ ವಿಷಯ. ನಮ್ಮ ನ್ಯೂನ್ಯತೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಆಗ ಖಂಡಿತಾ ನಮ್ಮ ಪರಿಶ್ರಮಕ್ಕೆ ಜಯ ಸಿಗುತ್ತದೆ ಎಂದು ಹೇಳಿದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಸ್.ಎನ್. ಜಗದೀಶ್ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ನೀಡುವ ಪಿಂಚಣಿ ಯೋಜನೆಯನ್ನು ಜನರಿಗೆ ತಲುಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಸುರೇಶ್ ಆಚಾರ್ಯ ಕಾಣಿಯೂರು ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಉಪಸ್ಥಿತರಿದ್ದರು.
ಇದೇ ಸಂದರ್ಭ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಮಹೇಶ್ ನಿರ್ವಹಿಸಿದರು. ಅಂಗವೈಕಲ್ಯವನ್ನು ಮೆಟ್ಟಿನಿಂತು ದ್ವಿತೀಯ ಪಿಯುಸಿಯಲ್ಲಿ 600ರಲ್ಲಿ 524 ಅಂಕ ಗಳಿಸಿದ ಕೌಶಿಕ್ ಬಂಟ್ವಾಳ್, ಎಸ್ಎಸ್ಎಲ್ಸಿಯಲ್ಲಿ 620 ಅಂಕ ಗಳಿಸಿದ ಪ್ರಣವ್, ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದ ಕ್ರೀಡಾ ಪ್ರತಿಭೆ ಪ್ರಜ್ಞಾ ಬಿ. ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಆಯ್ಕೆಯಾದವರನ್ನು ಗೌರವಿಸಲಾಯಿತು.
ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಕೆ. ಹಾಗೂ ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಪ್ರಕಾಶ್ ವರದಿ ವಾಚಿಸಿದರು. ಕೋಶಾಧಿಕಾರಿಗಳಾದ ವಸಂತ ಆಚಾರ್ಯ ಹಾಗೂ ರಮೇಶ್ ಆಚಾರ್ಯ ಮಾಮೇಶ್ವರ ಲೆಕ್ಕಪತ್ರ ಮಂಡಿಸಿದರು.
ಶ್ರೀನಿವಾಸ್ ಪಡೀಲ್ ಪ್ರಾರ್ಥಿಸಿದರು. ವಿಶ್ವಕರ್ಮ ಯುವ ಸಮಾಜದ ಸಾಂಸ್ಕೃತಿಕ ಕಾರ್ಯದರ್ಶಿ ಬಿ.ವಿ. ಕಿಶನ್ ಹಾಗೂ ವಿಶ್ವಬ್ರಾಹ್ಮಣ ಸೇವಾ ಸಂಘದ ಜತೆ ಕಾರ್ಯದರ್ಶಿ ಆನಂದ ಆಚಾರ್ಯ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು. ವಿಶ್ವಬ್ರಾಹ್ಮಣ್ಯ ಸೇವಾ ಸಂಘದ ಸಮಿತಿ ಸದಸ್ಯ ಸುರೇಂದ್ರ ಆಚಾರ್ಯ ವಂದಿಸಿದರು.