ಪುತ್ತೂರು: ಎಲ್ಲಾ ಕ್ರೀಡೆಗಳು ತನ್ನದೇ ಆದ ಸ್ಥಾನಮಾನಗಳನ್ನು ಹೊಂದಿದೆ.ಅದರಲ್ಲಿಯೂ ಚದುರಂಗ ವಿಶಿಷ್ಟ ಮೌಲ್ಯವನ್ನು ಪಡೆದಿದೆ.ವಿಶ್ವದಾದ್ಯಂತ ತನ್ನದೇ ಆದ ಪ್ರಾಶಸ್ತ್ಯವನ್ನು ಗಳಿಸಿಕೊಂಡಿದೆ. ನಮ್ಮ ಭಾರತೀಯರು ಚದುರಂಗದಲ್ಲಿ ಗಣನೀಯ ಸಾಧನೆಯನ್ನು ಗೈದಿದ್ದಾರೆ ಅಲ್ಲದೇ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕೂಡಾ ಚೆಸ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಸಾಧನೆಗೈದಿದ್ದಾರೆ ಎಂದು ನ್ಯಾಯವಾದಿ ಮುರಳಿಕೃಷ್ಣ ಕೆ.ಎನ್ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ 41 ನೇ ಮಾನ್ಸೂನ್ ಚೆಸ್ ನ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಚದುರಂಗ ಆಟವನ್ನು ಆಡಿದವರು ಜೀವನದಲ್ಲಿ ಸೋತಿರುವುದು ಇತಿಹಾಸದಲ್ಲೇ ಇರಲು ಸಾಧ್ಯವಿಲ್ಲ. ಚದುರಂಗದ ಆಟಗಾರರು ತಮ್ಮ ಜೀವನದಲ್ಲಿಯೂ ಶಿಸ್ತು ಹಾಗೂ ತಾಳ್ಮೆಯಂತಹ ಮೌಲ್ಯಗಳನ್ನು ರೂಪಿಸಿಕೊಳ್ಳುತ್ತಾರೆ. ಇದು ಒಂದು ಮೆದುಳಿನ ಆಟವಾದುದರಿಂದ ನಮ್ಮಲ್ಲಿ ಸ್ಮರಣಾಶಕ್ತಿಯನ್ನು ಹೆಚ್ಚಿಸಲು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೋ.ವಿಷ್ಣು ಗಣಪತಿ ಭಟ್, ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ.ಶಿವಪ್ರಸಾದ್, ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಹಾಗೂ ಚೆಸ್ ಆರ್ಬಿಟರ್ ಪ್ರಸನ್ನ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಜ್ಯೋತಿ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಬಾರ್ತಿಕುಮೇರು ವಂದಿಸಿದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ.ಪಿ.ಆರ್ ನಿಡ್ಪಳ್ಳಿ ನಿರೂಪಿಸಿದರು.
ಮೂರು ದಿನಗಳ ಕಾಲ ನಡೆದ 41 ನೇಯ ಮಾನ್ಸೂನ್ ಚೆಸ್ ಪಂದ್ಯಾಟದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀರಾಮ್ ಪ್ರಥಮ ಸ್ಥಾನ, ಡಾ.ಬಿ.ಬಿ.ಹೆಗಡೆ ಕಾಲೇಜಿನ ದಿವ್ಯಾ ದ್ವಿತೀಯ ಸ್ಥಾನ, ಎಸ್ ಪಿಇಸಿ ಕಾಲೇಜು ಉಡುಪಿಯ ಪ್ರಜ್ವಲ್ ನಾಯಕ್ ತೃತೀಯ ಸ್ಥಾನ, ಯುಪಿಎಂಸಿ ಕಾಲೇಜಿನ ಕಾರ್ತಿಕ್ ನಾಲ್ಕನೇ ಸ್ಥಾನ, ಎಸ್ ಡಿಎಂ ಉಜಿರೆ ಕಾಲೇಜಿನ ಇರ್ಫಾನ್, ಸ್ಕಂದ ಭಾರ್ಗವ್, ಆದೇಶ್ ರಾಜ್ವೀರ್, ಐದು, ಆರು ಹಾಗೂ ಏಳನೇಯ ಸ್ಥಾನ, ಎಸ್ ವಿ ಎಸ್ ಕಾಲೇಜಿನ ಸುಹಾಸ್ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಅಚ್ಚುತ ಶ್ರೀಶ ಒಂಭತ್ತನೇಯ ಸ್ಥಾನ ಮತ್ತು ಎಸ್ ಡಿ ಎಂ ಉಜಿರೆಯ ರಾಹುಲ್ ಜೈನ್ ಹತ್ತನೇ ಸ್ಥಾನ ಗಳಿಸಿದ್ದಾರೆ.ಮತ್ತು ಅತ್ಯುತ್ತಮ ಮಹಿಳಾ ಆಟಗಾರ್ತಿ ಜಿಎಫ್ ಜಿಸಿ ಕೋಟೇಶ್ವರ ಕಾಲೇಜಿನ ನವ್ಯ, ಪುತ್ತೂರಿನ ವಿವೇಕಾನಂದ ಕಾಲೇಜಿನ ಡಿಂಪಲ್ ಸೋಮಯ್ಯ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜಿನ ಅನೀತ ಪಡೆದುಕೊಂಡಿದ್ದಾರೆ.