ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದ ಧರೆ ಕುಸಿತಗೊಂಡಿದ್ದು, ಪಕ್ಕದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣ ಗೋಡೆ ಕುಸಿಯುವ ಭೀತಿಯಲ್ಲಿದೆ.
ಕೊಂಬೆಟ್ಟು ತಾಲೂಕು ಕ್ರೀಡಾಂಗಣದ ಶಾಲಾ ಭಾಗದಲ್ಲಿ ಧರೆ ಕುಸಿತಗೊಂಡಿದೆ. ಇದರಿಂದ ಈ ಭಾಗದ ಗೋಡೆಯಲ್ಲಿ ಕಂದಕವೊಂದು ನಿರ್ಮಾಣವಾದಂತಾಗಿದೆ. ಮತ್ತೊಂದು ಕಡೆ ಧರೆಯ ಮೇಲ್ಭಾಗದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾಲಾ ಆವರಣ ಗೋಡೆ ವಾಲಿದ್ದು, ಕುಸಿಯುತ ಭೀತಿಯಲ್ಲಿದೆ. ಸುಮಾರು 2 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಹೊಂದಿರುವ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಮುನ್ನೆಚ್ಚರಿಕಾ ಟೇಪ್ ಕಟ್ಟಲಾಗಿದೆ.
ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ನಗರಸಭಾ ಸ್ಥಳೀಯ ಸದಸ್ಯರೂ ಮತ್ತು ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಕಾರ್ಯಾಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಭೇಟಿ ನೀಡಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಸುರೇಶ್, ಉಪಪ್ರಾಂಶಪಾಲ ವಸಂತ್ ಮೂಲ್ಯ ಅವರು ಆವರಣ ಗೋಡೆ ವಾಲಿದ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.