ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮದ ಕೂಟೇಲು ಮುಡ್ಪಿನಡ್ಕ ಹೋಗುವ ಪಂಚಾಯತ್ ಕಾಲು ದಾರಿಯಲ್ಲಿ ಅಲ್ಲಲ್ಲಿ ಹುಲ್ಲು, ಕೆಸರು ತುಂಬಿ ಜನ ಸಂಚಾರಕ್ಕೆ ಅಯೋಗ್ಯವಾಗಿದ್ದು ತಕ್ಷಣ ದುರಸ್ತಿ ಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೂಟೇಲಿನಿಂದ ಬರೆ, ಪಟ್ಟೆ, ಕಂಬಳತ್ತಡ್ಡ, ದೇರ್ಲ, ಪಳಂಬೆಗಾಗಿ ಮುಡ್ಪಿನಡ್ಕ ಸೇರುವ ಸುಮಾರು ಅಂದಾಜು 2 ಕಿ.ಮೀ ದೂರ ಇರುವ ಈ ಕಾಲು ದಾರಿ ಒಬೀರಾಯನ ಕಾಲದ್ದು.ಈ ದಾರಿ ತೋಡಿನ ಬದಿಯಿಂದಲೇ ಸಾಗುತ್ತಿದ್ದು ತೋಡಿನ ಬದಿ ಅಲ್ಲಲ್ಲಿ ಜರಿದು ದಾರಿಯೇ ಇಲ್ಲದಾಗಿದೆ.ಅಲ್ಲದೆ ಬೇಲಿ ದಾರಿಗೆ ಬಾಗಿ, ದಾರಿಯಲ್ಲಿ ಹುಲುಸಾಗಿ ಹುಲ್ಲು ಬೆಳೆದು ಅದರ ನಡುವೆ ಅಂಜುತ್ತಲೇ ನಡೆಯ ಬೇಕಾಗಿದೆ.
ಕೆಲವು ವರ್ಷಗಳಿಂದ ಇದರ ದುರಸ್ತಿಯನ್ನೇ ಮಾಡದೆ ಜನರ ಸಂಚಾರಕ್ಕೆ ತೊಡಕಾಗಿದೆ.ಕಂಬಳತ್ತಡ್ಡ ಎಂಬಲ್ಲಿ ದಾರಿ ಬದಿ ಕೆರೆ ಕುಸಿದು ಅಲ್ಪ ದಾರಿ ಮಾತ್ರ ಉಳಿದಿದೆ.ಅದು ಇನ್ನಷ್ಟು ಕುಸಿದರೆ ದಾರಿ ಇಲ್ಲದಾಗುತ್ತದೆ.ಕಂಬಳತ್ತಡ್ಡದಲ್ಲಿ ಹುಲ್ಲು ಬೆಳೆದು ದಾರಿಯಲ್ಲಿ ಕೆಸರು ತುಂಬಿ ಜನಸಂಚಾರಕ್ಕೆ ಬಹಳ ಸಮಸ್ಯೆಯಾಗಿದ್ದು ಕತ್ತಲಾದರಂತೂ ಇಲ್ಲಿ ನಡೆಯುವುದೇ ಒಂದು ಸಾಹಸವಾಗಿದೆ.
ಆದುದರಿಂದ ಈ ದಾರಿಯಲ್ಲಿ ನಡೆಯುವಾಗ ಯಾವುದೇ ದುರ್ಘಟನೆ ನಡೆಯುವ ಮೊದಲು ಸಂಬಂಧ ಪಟ್ಟ ಇಲಾಖೆ,ಗ್ರಾಮ ಪಂಚಾಯತ್ ತಕ್ಷಣ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಲಿ ಎಂಬುದೇ ಸಾರ್ವಜನಿಕರ ಆಶಯ ಮತ್ತು ಒತ್ತಾಯವಾಗಿದೆ.