ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರ ಉದ್ಘಾಟನೆ

0

  • ಜನರ ಆರೋಗ್ಯ ದೃಷ್ಟಿಯಿಂದ ಇಂತಹ ಶಿಬಿರಗಳು ಶ್ಲಾಘನೀಯ-ಉಮಾನಾಥ್ ಪಿ.ಬಿ

ಪುತ್ತೂರು: ಕಳೆದ ಆರು ವರ್ಷಗಳಿಂದ ಡಾ.ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಥೈರಾಯಿಡ್ ಗ್ರಂಥಿಯ ಉಚಿತ ಶಿಬಿರವು ಪ್ರತಿ ತಿಂಗಳು ಆಯೋಜಿಸಿದೆ ಮಾತ್ರವಲ್ಲ ಫಲಾನುಭವಿಗಳು ಇದರ ಉಪಯೋಗವನ್ನೂ ಕೂಡ ಮಾಡುತ್ತಿದ್ದಾರೆ. ಆದ್ದರಿಂದ ಜನರ ಆರೋಗ್ಯದ ದೃಷ್ಟಿಯಿಂದ ಇಂತಹ ಶಿಬಿರಗಳು ಅತ್ಯಗತ್ಯವಾಗಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿರವರು ಹೇಳಿದರು.


ಜು.13ರಂದು ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್, ರೋಟರಿ ಕ್ಲಬ್ ಪುತ್ತೂರು, ಮೆಕ್ಲಿಯಾಡ್ ಕಂಪೆನಿ ಮತ್ತು ಎಸ್‌ಆರ್‌ಎಲ್ ಲ್ಯಾಬ್ ಇವುಗಳ ಸಹಯೋಗದಲ್ಲಿ ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ|ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಿಂಗಳಿಗೊಮ್ಮೆ ಆಯೋಜಿಸಲಾಗುವ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರವನ್ನು ಅವರು ಮಾತಿನ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಾದವನಿಗೆ ಕಾಯಿಲೆ ಬಾಧಿಸುವುದು ಸಹಜ ಗುಣ. ಆದರೆ ಮಾನವನ ಅತೀವ ಅಸಡ್ಡೆ, ನಿಯಮಿತ ಆಹಾರವನ್ನು ತೆಗೆದುಕೊಳ್ಳುವಲ್ಲಿ ಉದಾಸೀನ ಪ್ರವೃತ್ತಿಯ ಧೋರಣೆ ಮತ್ತು ಸೂಕ್ತ ವ್ಯಾಯಾಮವಿಲ್ಲದಿದ್ದಾಗ ಮಾತ್ರ ಕಾಯಿಲೆಗಳು ಬಾಧಿಸುತ್ತವೆ. ಯಾವುದೇ ಕಾಯಿಲೆ ಬಂದಾಗ ಅವನ್ನು ಕಡೆಗಣಿಸದೆ ತಜ್ಞ ವೈದ್ಯರುಗಳಲ್ಲಿ ಪರೀಕ್ಷಿಸಿದರೆ ಆರೋಗ್ಯವೂ ಉತ್ತಮವಾಗುವುದು. ಆದ್ದರಿಂದ ಪ್ರತಿಯೋರ್ವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಜಾಗರೂಕತೆ ವಹಿಸಬೇಕು ಎಂದರು.

ಕ್ಲಿನಿಕ್‌ನ ವೈದ್ಯಕೀಯ ತಜ್ಞ ಡಾ.ನಝೀರ್ ಅಹಮ್ಮದ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಥೈರಾಯಿಡ್ ಸಮಸ್ಯೆಯು ವಂಶಪಾರಂಪರೆಯಿಂದಲೂ ಬರಬಹುದು ಅಥವಾ ಬರದೇ ಇರಲೂ ಬಹುದು. ಥೈರಾಯಿಡ್ ರೋಗವು ಹಲವು ವಿಧದಲ್ಲಿ ಇರುತ್ತದೆ. ಸಾಮಾನ್ಯ ವಯಸ್ಸು ೪೦ ಆದಾಗ ಮಾನವನ ಆರೋಗ್ಯದಲ್ಲಿ ಏರುಪೇರು ಆಗುವುದು ಸಾಮಾನ್ಯವಾಗಿದೆ. ಆರೋಗ್ಯದಲ್ಲಿ ಏನಾದರೂ ನೋವು ಬಂದಾಗ ಧೃತಿಗೆಡದೆ ತಜ್ಞ ವೈದ್ಯರುಗಳಲ್ಲಿ ತೋರಿಸಿದರೆ ಉತ್ತಮ. ಬಿಡುವಿಲ್ಲದ ಜೀವನ ಜಂಜಾಟದಲ್ಲಿ ಮಾನವ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆರೋಗ್ಯವು ಸ್ಥಿಮಿತದಲ್ಲಿರಲು ಸಾಧ್ಯವಾಗದು ಎಂದು ಹೇಳಿ ಪುರುಷನಲ್ಲಿ ಹಾಗೂ ಮಹಿಳೆಯರಲ್ಲಿ ಅದರಲ್ಲೀ ಗರ್ಭಿಣಿ ಮಹಿಳೆಯರಲ್ಲಿ ಆಗುವ ಥೈರಾಯಿಡ್ ಗ್ರಂಥಿಯ ಸಮಸ್ಯೆಗಳೇನು?, ಇದಕ್ಕೆ ಪರಿಹಾರಗಳೇನು? ಎಂಬುದರ ಬಗ್ಗೆ ವಿವರಿಸಿದರು.

ರೋಟರಿ ಪುತ್ತೂರು ಕಾರ್ಯದರ್ಶಿ ಡಾ.ಶ್ರೀಪ್ರಕಾಶ್‌ರವರು ಸ್ವಾಗತಿಸಿ ಮಾತನಾಡಿ, ಪ್ರತಿಯೋರ್ವರಿಗೂ ಏನಾದರೊಂದು ಕಾಯಿಲೆ ಬಾಧಿಸುತ್ತಲೇ ಇರುತ್ತದೆ. ಡಾ.ನಝೀರ್‌ರವರು ಸಮಾಜ ಸ್ವಸ್ಥತೆಯಲ್ಲಿ ಹಾಗೂ ಶಾರೀರಿಕವಾಗಿ ದೃಢತೆಯಲ್ಲಿ ಇರಲಿ ಎಂಬುದಾಗಿ ಈ ಥೈರಾಯಿಡ್ ಶಿಬಿರವನ್ನು ಉಚಿತವಾಗಿ ನಡೆಸುತ್ತಿದ್ದಾರೆ. ಜೊತೆಗೆ ರೋಟರಿ ಕ್ಲಬ್‌ನಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಫಲಾನುಭವಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಉಪಾಧ್ಯಕ್ಷ ಜೈರಾಜ್ ಭಂಡಾರಿ, ಮೆಕ್ಲಿಯಾಡ್ ಕಂಪೆನಿಯ ವೀರೇಂದ್ರ, ಎಸ್‌ಆರ್‌ಎಲ್ ಲ್ಯಾಬ್‌ನ ಚಂದ್ರಕಲಾರವರು ಉಪಸ್ಥಿತರಿದ್ದರು. ಮೆಕ್ಲಿಯಾಡ್ ಕಂಪೆನಿ, ಎಸ್‌ಆರ್‌ಎಲ್ ಲ್ಯಾಬ್ ಹಾಗೂ ಡಾ,ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನ ಸಿಬ್ಬಂದಿಗಳು ಸಹಕರಿಸಿದರು.

50 ಮಂದಿ ಫಲಾನುಭವಿಗಳು…
ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳ ೫೦ ಮಂದಿ ಫಲಾನುಭವಿಗಳು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಪಡೆದುಕೊಂಡರು.

LEAVE A REPLY

Please enter your comment!
Please enter your name here