- ಕುಟುಂಬ ಸಂಬಂಧದ ಸಂದೇಶ ಸಾರಿದ ವಿಭಿನ್ನ ಕಾರ್ಯಕ್ರಮ
ಪುತ್ತೂರು: ನೆ.ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಕೊಟ್ಟೆಕ್ಕಾಡ್ ಮತ್ತು ಚೇರೆಕ್ಕಾಡ್ ಮನೆತನದ ಎರಡು ಕುಟುಂಬಗಳು ಸೇರಿಕೊಂಡು `ಕುಟುಂಬದ ಐಕ್ಯತೆ ಕಾಲದ ಬೇಡಿಕೆ” ಎಂಬ ಘೋಷವಾಕ್ಯದೊಂದಿಗೆ ಈದ್ ಇಸ್ತಿರಾಹ್-2022ಕಾರ್ಯಕ್ರಮ ನಡೆಸಲಾಯಿತು.
ನಿರ್ದೇಶಕರಾದ ಅಬ್ದುಲ್ ಖಾದರ್ ಹಾಜಿ ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಮ್ಮದ್ ಮುಸ್ತಫಾ ಸಖಾಫಿ ದುವಾಶೀರ್ವಚನ ನೀಡಿದರು. ಸಂಚಾಲಕರಾದ ಅಬ್ದುಲ್ ಲತೀಫ್ರವರು ಪ್ರಾಸ್ತವಿಕ ಮಾತುಗಳನ್ನಾಡಿದರು.
ಜು.೯ರಂದು ಸಂಜೆ ಆರಂಭಗೊಂಡ ಕಾರ್ಯಕ್ರಮವು ಹಲವಾರು ಮನೋರಂಜನಾ ಆಟಗಳು, ದಫ್ ಪ್ರದರ್ಶನ, ಹಾಡು, ಪ್ರತಿಭಾ ಪುರಸ್ಕಾರ ಮತ್ತು ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಜು.೧೦ರ ರಾತ್ರಿ ಸಮಾರೋಪಗೊಂಡಿತು. ಹಳೆಯ ಕಾಲವನ್ನು ನೆನಪಿಸುವ ವಸ್ತು ಸಂಗ್ರಹಾಲಯ ಮತ್ತು ಕೃತಕವಾಗಿ ನಿರ್ಮಿಸಿದ ಕಾರಂಜಿ ನೋಡುಗರ ಗಮನ ಸೆಳೆಯಿತು.
ಈದುಲ್ ಅಝ್ಹಾ ಹಬ್ಬದ ಅಂಗವಾಗಿ ವಿಶಿಷ್ಟ ರೀತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ೨ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು. ಊರಿನ ಅನೇಕ ಗಣ್ಯರು, ಹಿತ್ಯೆಷಿಗಳು ಕಾರ್ಯಕ್ರಮಕ್ಕೆ ಶುಭ ಕೋರಿದರು. ಈದ್ ನಮಾಜಿನ ನಂತರ ಸಂಜೆಯವರೆಗೆ ನಡೆದ ಸಾರ್ವಜನಿಕ ಸಮ್ಮಿಲನದಲ್ಲಿ ಮಸೀದಿ ಉಸ್ತಾದರು, ಸಾಮಾಜಿಕ, ರಾಜಕೀಯ ನೇತಾರರು, ವೈದ್ಯಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆಯನ್ನು ಮಾಡಿದವರಿಗೆ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಈದುಲ್ ಅಝ್ಹಾ ಹಬ್ಬವು ಕುಟುಂಬ ಸಂಬಂಧವನ್ನೂ ಗಟ್ಟಿಗೊಳಿಸಲು ಸಂದೇಶ ಸಾರುತ್ತಿದ್ದು ಈ ನಿಟ್ಟಿನಲ್ಲಿ ಕೊಟ್ಟೆಕ್ಕಾಡ್ ಮತ್ತು ಚೇರೆಕ್ಕಾಡ್ ಫ್ಯಾಮಿಲಿ ವತಿಯಿಂದ ಹಮ್ಮಿಕೊಳ್ಳಲಾದ ಈದ್ ಇಸ್ತಿರಾಹ್ ಸಾರ್ವಜನಿಕ ಸಮ್ಮಿಲನ ಮಾದರಿಯೆನಿಸಿಕೊಂಡಿದ್ದು ಪ್ರಶಂಸೆಗೂ ಪಾತ್ರವಾಗಿದೆ.