ರಾಮಕುಂಜ: ಕೊಯಿಲ ಗ್ರಾ.ಪಂ.ವ್ಯಾಪ್ತಿಯ ರಾಮಕುಂಜ ಗಣೇಶನಗರದಲ್ಲಿ ಆಲಂಕಾರು ಸಿ.ಎ. ಬ್ಯಾಂಕಿನ ಕೊಯಿಲ ಶಾಖಾ ಕಚೇರಿ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ ಬಸ್ಸು ಪ್ರಯಾಣಿಕರ ತಂಗುದಾಣ ಹಾಗೂ ಪೊಲೀಸ್ ವಿಶ್ರಾಂತಿ ಕೊಠಡಿಯ ಉದ್ಘಾಟನೆ ಜು.12ರಂದು ನಡೆಯಿತು.
ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ಇಲ್ಲಿ ಇದ್ದ ಪೊಲೀಸ್ ಚೌಕಿ ಧ್ವಂಸವಾದ ಬಳಿಕ ಇಲ್ಲಿನ ಸಾರ್ವಜನಿಕರಿಂದ ಬಸ್ಸು ಪ್ರಯಾಣಿಕರ ತಂಗುದಾಣ ಹಾಗೂ ಪೊಲೀಸ್ ಚೆಕ್ಪೋಸ್ಟ್ ನಿರ್ಮಾಣಕ್ಕೆ ಬೇಡಿಕೆ ಬಂದಿತ್ತು, ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತಿಗೆ ಅನುದಾನಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಸುಮಾರು 3.60ಲಕ್ಷ ರೂ., ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜನತೆ ಇದರ ಸದುಪಯೋಗ ಪಡೆಯುವುದರೊಂದಿಗೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಸಂಕಲ್ಪಕ್ಕೆ ಕೈಜೋಡಿಸಬೇಕು ಎಂದರು. ಪೊಲೀಸರ ವಿಶ್ರಾಂತಿ ಕೊಠಡಿಯ ಕೀಲಿಯನ್ನು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ರವರಿಗೆ ಸಚಿವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಡಬ ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್. ಗೌಡ, ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರೂ ಆದ ಬಿಜೆಪಿ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಮಾಲತಿ ಕದ್ರ, ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ, ಸದಸ್ಯರಾದ ಕೇಶವ ಗಾಂಧಿಪೇಟೆ, ಪ್ರದೀಪ್ ಬಾಂತೊಟ್ಟು, ಕೊಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ಚಿದಾನಂದ ಪಾನ್ಯಾಲ್, ಸೀತಾರಾಮ ವಳಕಡಮ, ಚಂದ್ರಶೇಖರ ಗೌಡ ಮಾಳ, ಯತೀಶ್ ಸೀಗೆತ್ತಡಿ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಬೇಂಗದಪಡ್ಪು, ಹೇಮಾ ಮೋಹನ್ದಾಸ್ ಶೆಟ್ಟಿ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯಧುಶ್ರೀ ಆನೆಗುಂಡಿ, ಪ್ರಮುಖರಾದ ಪೂವಪ್ಪ ನಾಯ್ಕ ಆಲಂಕಾರು, ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಸದಾಶಿವ ಶೆಟ್ಟಿ ಮಾರಂಗ, ಶೇಷಪತಿ ರೈ ಗುತ್ತುಪಾಲು, ಸುಭಾಸ್ ಶೆಟ್ಟಿ ಆರ್ವಾರ ಮತ್ತಿತರರು ಉಪಸ್ಥಿತರಿದ್ದರು. ಆಲಂಕಾರು ಸಿ.ಎ. ಬ್ಯಾಂಕ್ ನಿರ್ದೇಶಕ ರಾಮಚಂದ್ರ ನಾಯ್ಕ ಸ್ವಾಗತಿಸಿದರು. ಬಿಜೆಪಿ ಮುಖಂಡ ಲಕ್ಷ್ಮೀನಾರಾಯಣ ರಾವ್ ಆತೂರು ವಂದಿಸಿದರು.