ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸ್ಥಗಿತಗೊಂಡು ಎಲ್ಲೆಡೆ ತ್ಯಾಜ್ಯ ರಾಶಿಗಳು ಕಾಣಿಸುವಂತಾಗಿದ್ದು, ಈ ಬಗ್ಗೆ ಗ್ರಾಮಸ್ಥರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಉಪ್ಪಿನಂಗಡಿ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಕಳೆದ 4 ವರ್ಷಗಳಿಂದ ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ನೇತೃತ್ವದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿತ್ತು, ಇತ್ತೀಚಿನ ದಿನಗಳಲ್ಲಿ ಒಂದಷ್ಟು ಲೋಪಗಳು ಕಂಡು ಬಂದು, ವರ್ತಕರಿಂದ ದೂರುಗಳು ವ್ಯಕ್ತವಾಗಿತ್ತು. ಇದಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿ ಪಿಡಿಒ. ನೋಟೀಸು ಜಾರಿ ಮಾಡಿದ್ದರೆನ್ನಲಾಗಿದೆ. ಅದಾಗ್ಯೂ ತ್ಯಾಜ್ಯ ಸಂಗ್ರಹಣಾಕಾರರ ಜೊತೆ ಒಂದಿಬ್ಬರು ವರ್ತಕರು ಜಗಳವಾಡಿದ್ದರೆನ್ನಲಾಗಿದ್ದು, ಬಳಿಕ ಏಕಾಏಕಿ ತ್ಯಾಜ್ಯ ಸಂಗ್ರಾಹಕರು ವಾಹನ ಸಹಿತ ಕಾಣಿಸದೇ ಹೋದಾಗ ತ್ಯಾಜ್ಯಗಳೆಲ್ಲಾ ರಸ್ತೆ ಬದಿಯಲ್ಲೇ ಅನಾಥವಾಗಿ ಉಳಿಯುವಂತಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ಸಮಸ್ಯೆ ಬಗೆ ಹರಿಯಲಿದೆ-ಉಷಾಚಂದ್ರ ಮುಳಿಯ: ತ್ಯಾಜ್ಯ ಸಮಸ್ಯೆಯ ಗಂಭೀರತೆಯ ಬಗ್ಗೆ ಅರಿವಾಗಿದೆ. ಈ ಕಳೆದ 5 ದಿನಗಳಿಂದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಗಳು ನಡೆಯುತ್ತಿದೆ. ಈ ಹಿಂದೆ ಶ್ರೀ ರಾಮಕೃಷ್ಣ ಆಶ್ರಮದ ಜೊತೆಗೆ ಆಗಿರುವ ಒಪ್ಪಂದದಲ್ಲಿ ಶೇಖರಣೆ ಆಗುವ ತ್ಯಾಜ್ಯಕ್ಕೂ ಪ್ರಸಕ್ತ ಈಗ ಶೇಖರಣೆ ಮಾಡಲಾಗುವ ತ್ಯಾಜ್ಯ ದುಪ್ಪಟ್ಟು ಅಽಕವಾಗುತ್ತಿದೆ. ಹೀಗಾಗಿ ತ್ಯಾಜ್ಯ ಸಂಗ್ರಹಣೆಯಲ್ಲಿ ಅಸ್ತವ್ಯಸ್ತವಾಗಿತ್ತು. ಈ ಬಗ್ಗೆ ಆಶ್ರಮದ ಸ್ವಾಮೀಜಿಯವರಲ್ಲಿ ಮಾತುಕತೆ ನಡೆಸಲಾಗಿದ್ದು, ಗುರುವಾರದಿಂದ ಎಂದಿನಂತೆ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಆಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಚಂದ್ರ ಮುಳಿಯ ತಿಳಿಸಿದ್ದಾರೆ.