ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಪ್ರಧಾನ ದೈವ ಹಾಗೂ ಗ್ರಾಮ, ಸೀಮೆಯಲ್ಲಿ ಪ್ರಮುಖವಾಗಿ ಆರಾಧಿಸಲ್ಪಡುವ ವ್ಯಾಘ್ರ ಚಾಮುಂಡಿ ದೈವಕ್ಕೆ ಜು.16 ರಂದು ಶನಿವಾರ ಬೆಳಿಗ್ಗೆ 8ಕ್ಕೆ ವಿಶೇಷ ಪ್ರಾರ್ಥನೆ ಹಾಗೂ ಸಂಕ್ರಮಣ ತಂಬಿಲ ನಡೆಯಲಿದೆ. ಕಳೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಸುಬ್ರಹ್ಮಣ್ಯ ದೇವರ ಪ್ರಧಾನ ದೈವವಾಗಿದ್ದು, ಭಕ್ತರ ಯಾವುದೇ ಹರಕೆ, ಬೇಡಿಕೆಗೆ ಅನುಗ್ರಹದಾಯಕ. ಸಹಸ್ರಾರು ವರ್ಷಗಳಿಂದ ಆರಾಧನೆಯಾಗುತ್ತಿರುವ ದೈವದ ಪೂರ್ಣಾನುಗ್ರಹ, ಯೋಜಿತ ದೇವಳಕ್ಕೆ ಜಾಗದ ಖರೀದಿ, ಜೀರ್ಣೋದ್ಧಾರ ಕಾರ್ಯಕ್ಕೆ ತ್ವರಿತ ವೇಗ ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮಹಾಕ್ಷೇತ್ರವಾಗಿಸುವ ಹಿನ್ನೆಲೆಯಲ್ಲಿ ಪ್ರಾರ್ಥನೆ ನಡೆಯಲಿದೆ.
ಕಾರ್ಪಾಡಿ ಸುಬ್ರಹ್ಮಣ್ಯ ದೇವರ ಬಲಭಾಗದಲ್ಲಿ ಗೋಪುರದಲ್ಲಿ ಆರಾಧಿಸಲ್ಪಟ್ಟು ಬಳಿಕ ಪ್ರತ್ಯೇಕ ಗುಡಿಯಾಗಿ ಅಂಗಣದಲ್ಲಿ ಸೇವೆ ನೆರವೇರುತ್ತಿದ್ದರೂ, ಪ್ರಸ್ತುತ ಈಗಿರುವ ಸ್ಥಳದ ನ್ಯೂನತೆ, ಮೂಲಸ್ಥಾನದಲ್ಲೇ ಪೂಜೆ, ತಂಬಿಲ ಆಗಬೇಕೆಂದು ಕಂಡು ಬಂದಿರುವ ಹಿನ್ನಲೆಯಲ್ಲಿ ಆದಷ್ಟು ಶೀಘ್ರವಾಗಿ ಸುತ್ತುಪೌಳಿಯಲ್ಲಿ ಸ್ಥಾನ ನೀಡುವ ದೃಷ್ಟಿಯಿಂದ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿಯವರು, ಭೂಮಿ ಖರೀದಿ ಸಮಿತಿಯವರು, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಬೈಲ್ ವಾರ್ ಸಮಿತಿಯವರ ಪ್ರಕಟಣೆ ತಿಳಿಸಿದೆ.