ಪುತ್ತೂರು: ನರಿಮೊಗರು ಸರಕಾರಿ ಐಟಿಐ ಯಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಜು.15ರಂದು ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.
ವಿಶ್ವ ಯುವ ಕೌಶಲ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳನ್ನು ಈ ಸಂದರ್ಭದಲ್ಲಿ ತರಬೇತಿದಾರರಿಗೆ ವಿತರಿಸಲಾಯಿತು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ವಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳ ಅನಾವರಣ ಯುವ ಕೌಶಲ್ಯ ದಿನಾಚರಣೆಯಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾದ ನಿವೃತ್ತ ಅಬಕಾರಿ ನಿರೀಕ್ಷಕ ಮಹಾಲಿಂಗ ನಾಯ್ಕ ನರಿಮೊಗರು ಮಾತನಾಡಿ ವಿದ್ಯಾರ್ಥಿಗಳ ಸುಸಂಸ್ಕೃತ ನಡವಳಿಕೆಯು ಸಂಸ್ಥೆಯ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿ ಎಂದು ಇದಕ್ಕೆ ಕಾರಣರಾದ ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ಇನ್ನೋರ್ವ ಮುಖ್ಯ ಅತಿಥಿ ನರಿಮೊಗರು ಸರಕಾರಿ ಉ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ್ ಜೈನ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನಾಂಗದಲ್ಲಿ ಕೌಶಲ್ಯತೆ ಇದ್ದಲ್ಲಿ ಮಾತ್ರ ಜೀವನ ಸಫಲತೆ ಸಾಧ್ಯ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಶೇಷ ಆಹ್ವಾನಿತರಾದ ಪುರುಷರಕಟ್ಟೆ ಪ್ರಾ.ಕೃ.ಪ.ಸ. ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕೆ. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಷಾ ಎಂ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು. ಯೋಗೀಶ್ ಪಿ. ಶಾಂತಿಗೋಡು ಅತಿಥಿಗಳನ್ನು ಸ್ವಾಗತಿಸಿದರು. ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು.
ಕೋಪಾ ವೃತ್ತಿವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಗುರುವಂದನಾ ಗೀತೆಗಾಯನ ನೆರವೇರಿಸಿದರು. ಕಛೇರಿ ಅಧೀಕ್ಷಕಿ ಹೇಮಾವತಿ ಎಸ್ ಧನ್ಯವಾದ ಅರ್ಪಿಸಿದರು.