ಪುತ್ತೂರು: ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಜಂಟಿ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಒಡಿಯೂರು ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ ಹಾಗೂ ಗುರುವಂದನೆ ಅಂಗವಾಗಿ ಒಳಾಂಗಣ ಹಾಗೂ ಹೋರಾಂಗಣ ಆಟೋಟ ಸ್ಪರ್ಧೆಗಳಿಗೆ ಜು.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಆಟೋಟ ಸ್ಪರ್ಧೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಕ್ರೀಡೆಯು ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಜತೆ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಸಹಕಾರಿಯಾಗಲಿವೆ. ಜಿಲ್ಲೆಯಲ್ಲಿ ಅತ್ಯುತ್ತಮ ಹೆಸರು ಪಡೆದಿರುವ ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ಕ್ರೀಡಾಕೂಟ ಯಶಸ್ವಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಶಾರೀರಿಕವಾಗಿ, ಉತ್ತಮ ಮನಸ್ಸು ಜಾಗೃತಿಗೊಳ್ಳಲು ಕ್ರೀಡೆ ಸಹಕಾರಿ. ಈ ನಿಟ್ಟಿನಲ್ಲಿ ಮಕ್ಕಳು ಮೊಬೈಲ್ಗಳನ್ನು ಗಮನ ಕೊಡುವುದನ್ನು ಮರೆತು ಇಂತಹಾ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಉಪನ್ಯಾಸಕಿ ವತ್ಸಲಾರಾಜ್ಞಿ ಮಾತನಾಡಿ, ಆಧ್ಯಾತ್ಮಿಕಕ್ಕೆ ಪೂರಕವಾದ ಹನುಮಾನ ಚಾಲಿಸ್, ಭಗವದ್ಗೀತೆ ಕುರಿತ ಸ್ಪರ್ಧೆಗಳನ್ನು ಇಲ್ಲಿ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡ ಕೂಟಗಳು ಗ್ರಾಮೀಣ ಪ್ರದೇಶಗಳಲ್ಲಿ ಒಗ್ಗೂಡಿಸುವ ಕಾರ್ಯವಾಗುತ್ತಿದೆ ಎಂದರು. ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಾತನಾಡಿ, ಇಂತಹ ಕ್ರೀಡಾ ಕೂಟಗಳು ತಾಲೂಕು ಮಟ್ಟದಲ್ಲಿ ನಡೆಯಲಿ ಎಂದರು.
ಸಮಿತಿಯ ಭವಾನಿ ಶಂಕರ, ಜಯಪ್ರಕಾಶ್, ತಾಲೂಕು ಮೇಲ್ವಿಚಾರಕಿ ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಂತಾ ಕುಂಟಿನಿ ಪ್ರಾರ್ಥನೆ ಹಾಡಿದರು. ಕ್ರೀಡಾ ಸಂಚಾಲಕರಾದ ನಯನಾ ರೈ ಸ್ವಾಗತಿಸಿ, ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳಿ ಜರಗಿದವು.