ಭಾರೀ ಮಳೆ: ನೆಲ್ಯಾಡಿ ಪರಿಸರದಲ್ಲಿ ತೋಟಕ್ಕೆ ನುಗ್ಗಿದ ನೀರು

0

  • ಪಡುಬೆಟ್ಟು ದೇವಸ್ಥಾನ ಜಲಾವೃತ
  •  ಕೊಲ್ಯೊಟ್ಟಲ್ಲಿ ರಸ್ತೆ ಸಂಪರ್ಕ ಬಂದ್

 

 

ನೆಲ್ಯಾಡಿ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೆಲ್ಯಾಡಿ ಪರಿಸರದಲ್ಲಿ ಮಳೆ ನೀರು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಆಗಿದೆ. ಗ್ರಾಮದ ಪಡುಬೆಟ್ಟು ದೇವಸ್ಥಾನದ ಜಲಾವೃತಗೊಂಡಿತ್ತು. ಕೊಲ್ಯೊಟ್ಟುನಲ್ಲಿ ರಸ್ತೆ ಸಂಪರ್ಕ ಬಂದ್ ಆಗಿ ಸುಮಾರು 3 ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.


ಕಳೆದ ರಾತ್ರಿ ನಿರಂತರ ಮಳೆಯಾಗಿದ್ದು ಮಳೆ ನೀರಿನಿಂದ ಹಳ್ಳ, ಹೊಳೆ ಭರ್ತಿಗೊಂಡು ನೀರು ತೋಟಗಳಿಗೆ ನುಗ್ಗಿದೆ. ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು, ಪರಾರಿ,ಆಮುಂಜ ಭಾಗದಲ್ಲಿ ಹೊಳೆ ನೀರು ತೋಟಗಳಿಗೆ ನುಗ್ಗಿದ್ದು ತೋಟ,ಕೃಷಿಗಳು ಜಲಾವೃತಗೊಂಡಿತ್ತು. ಇದರಿಂದಾಗಿ ಅಪಾರ ಕೃಷಿ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಪೊಸೊಳಿಕೆ ಎಂಬಲ್ಲಿ ಹೊಳೆ ನೀರು ಪರಿಸರದ ಅಡಿಕೆ ತೋಟಗಳಿಗೆ ನುಗ್ಗಿ ಹಾನಿ ಸಂಭವಿಸಿದೆ.

ದೇವಸ್ಥಾನ ಜಲಾವೃತ:
ಮಳೆ ನೀರಿನಿಂದಾಗಿ ನೆಲ್ಯಾಡಿ ಗ್ರಾಮದ ಪಡುಬೆಟ್ಟು ದೇವಸ್ಥಾನಕ್ಕೆ ನೀರು ನುಗ್ಗಿದ ಪರಿಣಾಮ ಜು.೧೮ರಂದು ಬೆಳಿಗ್ಗೆ ಜಲಾವೃತಗೊಂಡಿತ್ತು. ದೇವಸ್ಥಾನ ಸಮೀಪದ ಸಣ್ಣ ಹೊಳೆಯಲ್ಲಿ ನೀರು ಭರ್ತಿಯಾಗಿ ದೇವಸ್ಥಾನದ ಹೊರಾಂಗಣ, ಒಳಾಂಗಣಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಸುತ್ತಲೂ ನೀರು ಆವರಿಸಿಕೊಂಡಿತ್ತು. ಬೆಳಗ್ಗಿನ ಜಾವ ಮಳೆ ಕಡಿಮೆಯಾದುದರಿಂದ ಬೆಳಿಗ್ಗೆ ಸುಮಾರು 9ಗಂಟೆ ವೇಳೆಗೆ ನೀರು ಕಡಿಮೆಯಾಗಿ ದೇವಸ್ಥಾನ ಮಾಮೂಲಿ ಸ್ಥಿತಿಗೆ ಬಂದಿತ್ತು. ಈ ಪರಿಸರದ ತೋಟ, ಗದ್ದೆಗಳೂ ಮಳೆ ನೀರಿನಿಂದಾಗಿ ಜಲಾವೃತಗೊಂಡಿತ್ತು.

 

ಕೊಲ್ಯೊಟ್ಟಲ್ಲಿ ಸಂಪರ್ಕ ಬಂದ್:
ಮಾದೇರಿ-ಕೊಲ್ಯೊಟ್ಟು-ನೆಲ್ಯಾಡಿ ಸಂಪರ್ಕ ರಸ್ತೆಯ ಕೊಲ್ಯೊಟ್ಟು ಎಂಬಲ್ಲಿ ಮಳೆ ನೀರು ರಸ್ತೆಗೆ ಬಂದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇಲ್ಲಿ ಮಳೆ ನೀರು ಸುಮಾರು ೨ ಅಡಿಗೂ ಹೆಚ್ಚು ನಿಂತ ಪರಿಣಾಮ ವಾಹನ ಓಡಾಟಕ್ಕೆ ತೊಂದರೆಯಾಗಿತ್ತು. ಸುಮಾರು ೩ ಗಂಟೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು ಎಂದು ತಿಳಿದುಬಂದಿದೆ. ಈ ಭಾಗದ ಇನ್ನೂ ಹಲವು ಕಡೆಗಳಲ್ಲಿ ಮಳೆ ನೀರಿನಿಂದಾಗಿ ಜನರಿಗೆ ತೊಂದರೆಯಾಗಿದೆ.

LEAVE A REPLY

Please enter your comment!
Please enter your name here