ಪುತ್ತೂರು: ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗಿರುವ ಹಿನ್ನಲೆಯಲ್ಲಿ ಪುತ್ತೂರು ನಗರಸಭೆ ಅಧಿಕಾರಿಗಳು ಜು.18 ರಂದು ಪುತ್ತೂರು ಸಂತೆ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳಿಂದ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ನಗರಸಭೆ ಈಗಾಗಲೇ ಪ್ರತ್ರಿಕೆ ಮಾದ್ಯಮದ ಮೂಲಕ ಮತ್ತು ವರ್ತಕರಿಗೆ ನೋಟಿಸು ನೀಡುವ ಮೂಲಕ ಪ್ಕಾಸ್ಟಿಕ್ ನಿಷೇಧಿಸುವಂತೆ ಎಚ್ಚರಿಕೆ ನೀಡಿದ್ದು, ಇದೀಗ ಅಂಗಡಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲೂ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಇದೀಗ ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಗೋಣಿಯಲ್ಲಿ ಪ್ಲಾಸ್ಟಿಕ್ ತುಂಬುವಷ್ಟು ಪ್ಲಾಸ್ಟಿಕ್ ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್ ಮತ್ತು ವರಲಕ್ಷ್ಮೀಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.