ಪುತ್ತೂರು : ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 2022-23ನೇ ಸಾಲಿನ ವಿದ್ಯಾರ್ಥಿ ಸರಕಾರದ ಸಂಸತ್ತಿನ ಪದಗ್ರಹಣ ಸಮಾರಂಭ ಶ್ರೀಗೋಪಾಲಕೃಷ್ಣ ಸಭಾಭವನದಲ್ಲಿ ಜರುಗಿತು. ಸಂಸತ್ತಿನ ಪ್ರಥಮ ಸಮಾವೇಶದಲ್ಲಿ ವಿದ್ಯಾರ್ಥಿ ಸರಕಾರದ ರಾಜ್ಯಪಾಲೆ ಶಾಲಾ ಮುಖ್ಯಗುರು ಜಯಮಾಲಾ ವಿ.ಎನ್ರವರು ಮುಖ್ಯಮಂತ್ರಿ (ಶಾಲಾ ನಾಯಕ) ಹರ್ಷಿತ್ ಎಸ್.ನಾಯ್ಕ್ ಹಾಗೂ ಸಂಪುಟ ದರ್ಜೆ ಸಚಿವರಿಗೆ, ಸಹಾಯಕ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಮಾತನಾಡಿದ ಅವರು ಶಾಲಾ ನಿಯಮ, ವಿದ್ಯಾರ್ಥಿ ಮುಖಂಡರ ಜವಾಬ್ದಾರಿಯ ಬಗ್ಗೆ ತಿಳಿಸಿದರು. ನಂತರ ಸಭಾಪತಿ ಅಶ್ವಥ್ರವರು ವಿಪಕ್ಷ ನಾಯಕ ನಿಶಾಂತ್ ರೈ ಹಾಗೂ ಸದನದ ಇತರ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ನಂತರ ಮುಖ್ಯಮಂತ್ರಿ ಅವರು ಸಂಪುಟ ದರ್ಜೆ ಸಚಿವರುಗಳಿಗೆ, ಸಹಾಯಕ ಸಚಿವರುಗಳಿಗೆ ಖಾತೆಯನ್ನು ಹಂಚಿ ಸದನವನ್ನುದ್ದೇಶಿಸಿ ಮಾತನಾಡಿ ಎಲ್ಲಾ ಸದಸ್ಯರ ಸಹಕಾರ ಕೋರಿದರು. ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಮಾತನಾಡಿ ವಿದ್ಯಾರ್ಥಿಗಳ ಜವಾಬ್ದಾರಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ, ಶಿಸ್ತು ಪಾಲನೆ ಬಗ್ಗೆ ವಿವರಿಸಿದರು. ಸಭಾಪತಿ ಅಶ್ವಥ್ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿನಿಯರಾದ ಅಮೂಲ್ಯ ಹಾಗೂ ಹಂಸಿಕ ಪ್ರಾರ್ಥಿಸಿದರು. ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯರಾದ ಪ್ರಶಾಂತಿ, ಸೌಮ್ಯ ಹಾಗೂ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿ ಸಂಸತ್ತಿನ ಸಮಾವೇಶ ಸಂಯೋಜಿಸಿದರು.