ಪುತ್ತೂರು: ಬೆಟ್ಟಂಪಾಡಿಯಲ್ಲಿ ಸರಗಳ್ಳತನ ನಡೆಸಿ ಪರಾರಿಯಾಗಿದ್ದ ಕಳ್ಳರನ್ನು ತಿಂಗಳ ಬಳಿಕ ಸಾರ್ವಜನಿಕರೇ ಹಿಡಿದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ಒಪ್ಪಿಸಿದ ಘಟನೆ ಜು.18ರಂದು ನಡೆದಿದೆ.
ಬಂಧಿತ ಆರೋಪಿಗಳು ಕಾಸರಗೋಡು ಜಿಲ್ಲೆಯವರಾಗಿದ್ದು ಕರ್ನಾಟಕ – ಕೇರಳ ಸಹಿತ ಹಲವಡೆ ನಡೆದ ಕಳವು ಪ್ರಕರಣದಲ್ಲಿ ಇವರು ಭಾಗಿಯಾಗಿರುವ ಸಾಧ್ಯತೆ ಹೆಚ್ಚಿದ್ದು, ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಹಲವು ಪ್ರಕರಣಗಳು ಬಯಲಾಗುವ ಸಾಧ್ಯತೆ ಇದೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇದೀಗಾಗಲೇ ಸಾರ್ವಜನಿಕರು ಹಿಡಿದುಕೊಟ್ಟಿರುವ ಆರೋಪಿಗಳಿಬ್ಬರನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಈ ಬಗ್ಗೆ ತನಿಖೆ ಸೂಕ್ಷ್ಮಗೊಳಿಸಿರುವ ಪೊಲೀಸರು ತನಿಖಾ ದೃಷ್ಟಿಯಿಂದ ಬಂಧಿತರ ಹೆಸರು ಬಹಿರಂಗಗೊಳಿಸಿಲ್ಲ. ಹಲವು ಪ್ರಕರಣಗಳಲ್ಲಿ ಇವರೇ ಮಾಸ್ಟರ್ ಪಿನ್ ಗಳೇ ? ಅಥವಾ ಇವರ ಹಿಂದೆ ಇನ್ನೂ ಅನೇಕ ಕೈಗಳಿವೆಯಾ ? ಎನ್ನುವ ಪ್ರಶ್ನೆ ಕೇಳಿ ಬರುತ್ತದೆ. ಎಲ್ಲವೂ ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿಯಬೇಕಾಗಿದೆ.