ನೆಲ್ಯಾಡಿ: ಮನೆಯ ಬೀಗ ಮುರಿದು ಚಿನ್ನಾಭರಣ, ನಗದು ದೋಚಿರುವುದನ್ನು ಕೇಳಿದ್ದೇವೆ. ಈಗ ಕಬ್ಬಿಣದ ಗೇಟ್ಗೂ ಕಳ್ಳರು ಕಣ್ಣು ಹಾಕಿದ್ದು ಬಜತ್ತೂರು, ಹಳೆನೇರೆಂಕಿ ಗ್ರಾಮದ ಮೂರು ಕಡೆ ಒಂದೇ ದಿನ ರಾತ್ರಿ ಕಬ್ಬಿಣದ ಗೇಟ್ ಕಳ್ಳತನಗೊಂಡಿರುವುದು ವರದಿಯಾಗಿದೆ.
ಜು.14ರಂದು ರಾತ್ರಿ ಈ ಕಳ್ಳತನ ನಡೆದಿದೆ. ಹಳೆನೇರೆಂಕಿ ಗ್ರಾಮದ ಆರಾಟಿಗೆ ನಿವಾಸಿ ರೋಶನ್ ಬಳ್ಳಾಲ್ ಎಂಬವರ ತೋಟಕ್ಕೆ ಹೋಗುವ ಕಬ್ಬಿಣದ ಗೇಟ್, ಬಜತ್ತೂರು ಗ್ರಾಮದ ಮೇಲೂರುಪಟ್ಟೆ ನಿವಾಸಿ ವೀರೇಂದ್ರ ಜೈನ್ ಎಂಬವರಿಗೆ ಸೇರಿದ ಕಬ್ಬಿಣದ ಗೇಟ್ ಹಾಗೂ ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ಶಾಲೆಯ ಮುಂಭಾಗದಲ್ಲಿ ವ್ಯಕ್ತಿಯೋರ್ವರಿಗೆ ಸೇರಿದ ಜಾಗಕ್ಕೆ ಹೋಗುವ ಕಬ್ಬಿಣದ ಗೇಟ್ ಒಂದೇ ದಿನ ರಾತ್ರಿ ಕಳ್ಳತನಗೊಂಡಿದೆ. ಮೂರು ಕಡೆಯೂ ಗೇಟ್ಗಳು ಹೆದ್ದಾರಿ ಬದಿಯಲ್ಲಿಯೇ ಇದ್ದು ಸಮೀಪದಲ್ಲಿ ಮನೆಗಳಿಲ್ಲ. ಇದನ್ನು ಮನಗಂಡೇ ಯಾರೋ ಕಳ್ಳರು ಗೇಟ್ ದೋಚಿದ್ದಾರೆ ಎಂದು ಹೇಳಲಾಗಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿ ಆರಾಟಿಗೆ ನಿವಾಸಿ ರಾಜ್ ಜೈನ್ರವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಕಡಬ ಪೊಲೀಸರು ಜು.19ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಸಿಟಿವಿ ಪರಿಶೀಲನೆ:
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಚನ ಕ್ರಾಸ್ನಲ್ಲಿರುವ ಖಾಸಗಿ ವ್ಯಕ್ತಿಯೋರ್ವರ ಸಿಸಿಟಿವಿಯ ಪರಿಶೀಲನೆ ನಡೆಸಿದ್ದು ಜು.14ರಂದು ರಾತ್ರಿ ಸುಮಾರು 12 ಗಂಟೆ ವೇಳೆಗೆ ಟಾಟಾ ಎಸ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿಯಿಂದ ಕಾಂಚನ ಕಡೆಗೆ ಸಂಚರಿಸಿರುವುದು ಕಂಡುಬಂದಿದೆ ಎಂದು ರಾಜ್ ಜೈನ್ರವರು ಮಾಹಿತಿ ನೀಡಿದ್ದಾರೆ.