ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಗೂ ಜಿಎಸ್ಟಿ ಬರಬಹುದು-ಸಿರಾಜುದ್ದೀನ್ ಕೂರ್ನಡ್ಕ
ಸವಣೂರು :ಮೋದಿ ಸರಕಾರದಿಂದ ಜಿಎಸ್ಟಿ ತೆರಿಗೆ ಹೇರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜು.20ರಂದು ಸಂಜೆ ಸವಣೂರು ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಸಿರಾಜುದ್ದೀನ್ ಎ.ಕೆ ಕೂರ್ನಡ್ಕ ಅವರು, ಕೇಂದ್ರ ಬಿಜೆಪಿ ಸರಕಾರ ಅವೈಜ್ಞಾನಿಕವಾಗಿ ಜಿ.ಎಸ್.ಟಿ ಯನ್ನು ಕುಡಿಯುವ ನೀರು, ಹಾಲು, ಮಜ್ಜಿಗೆ, ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಹೇರಿಕೆ ಮಾಡಿ ಬಡ ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿ ಕಾರ್ಪೊರೇಟ್ ಕುಳಗಳನ್ನು ಪೋಷಿಸುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನಾವು ಉಸಿರಾಡುವ ಗಾಳಿಗೂ ಜಿಎಸ್ಟಿ ಪಾವತಿಸುವ ಕಾಲವೂ ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಜಿ.ಎಸ್.ಟಿ ತೆರಿಗೆಯ ವಿರುದ್ಧ ಹಾಗೂ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುವುದರ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಎಸ್ ಡಿಪಿಐ ಸುಳ್ಯ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಾಗೂ ಸವಣೂರು ಗ್ರಾ.ಪಂ.ಸದಸ್ಯ ಬಾಬು ಎನ್, ಸವಣೂರು ವಲಯಾಧ್ಯಕ್ಷ ಹಾಗೂ ಸವಣೂರು ಗ್ರಾ.ಪಂ.ಸದಸ್ಯ ಅಬ್ದುಲ್ ರಝಾಕ್ ಕೆನರಾ, ಎಸ್.ಡಿ.ಪಿ.ಐ ಸವಣೂರು ಬ್ಲಾಕ್ ಅಧ್ಯಕ್ಷ ಯೂಸುಫ್ ಹಾಜಿ ಬೇರಿಕೆ, ಕಾರ್ಯದರ್ಶಿ ಇಕ್ಬಾಲ್ ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.