ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಕರ್ನಾಟಕ ಸರಕಾರದ ಪ್ರಾಯೋಜಿತ ಮಂಗಳೂರು ವಿವಿ ವಲಯ ಮಟ್ಟದ ಸ್ಪರ್ಧಾಕೂಟವು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು.
ಎನ್ಸಿಸಿ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ಕ್ರಾಸ್ ಸೊಸೈಟಿ, ರೋವರ್ ಎಂಡ್ ರೇಂಜರ್ಸ್ ಮತ್ತು ಯಕ್ಷಕಲಾ ಕೇಂದ್ರ ಒಟ್ಟು ಸೇರಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಮತ್ತು ಮಾಹಿತಿ ಸಂಪರ್ಕಾಧಿಕಾರಿ ಡಾ|ಎ.ಪಿ.ರಾಧಾಕೃಷ್ಣ ಉದ್ಘಾಟಿಸಿದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷವಾಗುತ್ತಿರುವ ನೆನಪಿಗೆ ಬಂದಿದೆ. ಅಮೃತ ಮಹೋತ್ಸವದ ಸಂಭ್ರಮ. ಬಂದ ದಾರಿಯನ್ನು ಅವಲೋಕಿಸಿ ವಿಶ್ಲೇಶಿಸುವ ಹೊತ್ತು, ಭವಿಷ್ಯದ ಪಥದ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳುವ ಅವಕಾಶ ಬಂದಿದೆ. ಸ್ವಾತಂತ್ರ್ಯ ಸುಮ್ಮನೆ ಸಿಗಲಿಲ್ಲ, ಸಾವಿರಾರು ಮಂದಿ ಬಲಿದಾನವನ್ನು ಮಾಡಿದ್ದಾರೆ, ಅವರ ತ್ಯಾಗದ ಫಲವನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ದೇಶ ಅತ್ಯಂತ ದುರ್ಭರ ಸ್ಥಿತಿಯಲ್ಲಿತ್ತು. ನೂರಕ್ಕೂ ಕಡಿಮೆ ಶಿಕ್ಷಣ ಸಂಸ್ಥೆಗಳು, ಬೆರಳೆಣಿಕೆಯಷ್ಟೇ ವಿಜ್ಞಾನ ಸಂಶೋಧನ ಕೇಂದ್ರಗಳಿದ್ದುವು. ಸ್ವಾತಂತ್ರ್ಯದ ಬಳಿಕದ ದಿನಗಳಲ್ಲಿ ಹಲವು ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದುವು. ಇಸ್ರೋದಂಥ ಜಾಗತಿಕ ಮಟ್ಟದ ಶ್ರೇಷ್ಠ ವಿಜ್ಞಾನ ಕೇಂದ್ರಗಳ ಸ್ಥಾಪನೆಯಾಯಿತು. ಪಂಚವಾರ್ಷಿಕ ಯೋಜನೆಗಳಿಂದ ಹಸಿರು ಮತ್ತು ಕ್ಷೀರಕ್ರಾಂತಿ ಸಾಧ್ಯವಾಯಿತು. ದೇಶದ ಮಾಹಿತಿ ತಂತ್ರಜ್ಞಾನದ ಹೊಸ ಯುಗಕ್ಕೆ ಭದ್ರ ಅಡಿಪಾಯ ನಿರ್ಮಾಣವಾಯಿತು. ಸಮಸ್ಯೆಗಳ ನಡುವೆ ನಮ್ಮ ಸಾಧನೆ ಕಡಿಮೆಯದ್ದಲ್ಲ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳೆಂದರೆ ಅಗಾಧ ಸಾಮರ್ಥ್ಯದ ಶಕ್ತಿಯ ಊಟೆಗಳು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನಗೈದವರಲ್ಲಿ ಬಹುತೇಕ ಮಂದಿ ಯುವಕ ಯುವತಿಯರು. ಅವರ ತ್ಯಾಗವನ್ನು ಸ್ಮರಿಸಿಕೊಂಡು ನಮ್ಮಜವಾಬ್ದಾರಿಯ ಕುರಿತು ಚಿಂತನೆ ಮಾಡಬೇಕಾಗಿದೆ. ಪ್ರಾಮಾಣಿಕತೆಯ ಜೀವನ ನಮ್ಮದಾಗಬೇಕು, ಜಾತಿ, ಮತ, ಧರ್ಮಗಳ ಆಧಾರದಲ್ಲಿ ಚಿಂತನೆ ಮಾಡದೇ ದೇಶದ ಕುರಿತು ಒಗ್ಗಟ್ಟಾಗಿ ಚಿಂತನೆ ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರೆಡ್ಕ್ರಾಸ್ ಘಟಕದ ನಿರ್ದೇಶಕಿ ಡಾ|ಮಾಲಿನಿ ಸ್ವಾಗತಿಸಿ, ಎನ್ಎಸ್ಎಸ್ ಘಟಕದ ಅಧಿಕಾರಿ ಪ್ರೊ|ವಾಸುದೇವ ಎನ್ ವಂದಿಸಿದರು. ಪ್ರೊ|ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ವಿವಿ ಮಟ್ಟದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲು ಸಂಯೋಜನಾಧಿಕಾರಿಯಾಗಿ ನೇಮಕಗೊಂಡಿರುವ ಲೆ|ಜಾನ್ಸನ್ ಡೆವಿಡ್ ಸಿಕ್ವೆರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಾ, ಧನ್ಯ, ಶ್ರೀರಕ್ಷಾ, ನಿಲೇಶ್ ಡಾಯಸ್, ನ್ಯಾನ್ಸಿ ಲವೀನಾ ಪಿಂಟೋ, ರಾಜೇಶ್ವರಿ, ದಿನಕರ್ ಅಂಚನ್, ಶಶಿಪ್ರಭಾ ಮತ್ತು ಇತರ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
[box type=”note” bg=”#” color=”#” border=”#” radius=”22″]ಸ್ವಾತಂತ್ರೋತ್ಯವದ ಅಮೃತಮಹೋತ್ಸವ ಪ್ರಯುಕ್ತ ಚರ್ಚಾ ಸ್ಪರ್ಧೆ ನಡೆಯಿತು. ಮುಂದಿನ ದಿನಗಳಲ್ಲಿ ದೇಶ ಭಕ್ತಿಗೀತೆ, ಭಾಷಣ, ಪ್ರಬಂಧ, ಚಿತ್ರಕಲೆ, ನಾಟಕ ಮೊದಲಾದ ಸ್ಪರ್ಧೆಗಳು ನಡೆಯಲಿವೆ. ಸ್ವಾತಂತ್ರ್ಯದ ಓಟ ಎಂಬ ಶೀರ್ಷಿಕೆಯಲ್ಲಿ ದೂರ ಓಟದ ಸ್ಪರ್ಧೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.[/box]