ಸೂರಿಕುಮೇರು : ಪದವಿಯಲ್ಲಿ ರ‍್ಯಾಂಕ್ ಪಡೆದ ವಿಶೇಷಚೇತನ ಆದಿತ್ಯ ನಿಧನ

0

ಬಂಟ್ವಾಳ: ಕಳೆದ ಬಾರಿ ಮಂಗಳೂರು ವಿವಿ ಬಿಕಾಂ ಪರೀಕ್ಷೆಯಲ್ಲಿ 9ನೇ ರ‍್ಯಾಂಕ್ ಪಡೆದಿದ್ದ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ವಿದ್ಯಾರ್ಥಿ, ದೇಹದ ಮಾಂಸಖಂಡಗಳು ಕ್ಷೀಣಿಸುವ ಸಮಸ್ಯೆ ಇದ್ದರೂ ಛಲದಿಂದ ಪರೀಕ್ಷೆ ಬರೆದಿದ್ದ ಮಾಣಿ ಸೂರಿಕುಮೇರು ಬಳಿಯ ಕೃಷಿಕ ಗಣೇಶ್ ಭಟ್ ಉಷಾ ದಂಪತಿ ಪುತ್ರ ವಿಶೇಷಚೇತನ ಆದಿತ್ಯ (21ವ.) ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.21ರಂದು ನಿಧನ ಹೊಂದಿದರು.

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021ನೇ ಸಾಲಿನ ಅಂತಿಮ ಬಿ.ಕಾಂ ಪದವಿಯಲ್ಲಿ ಶೇ.93.8 ಅಂಕದೊಂದಿಗೆ ರ‍್ಯಾಂಕ್ ಗಳಿಸಿದ್ದ ಪ್ರತಿಭಾವಂತ ಆದಿತ್ಯ ಹುಟ್ಟಿನಿಂದ ಮಾಂಸಖಂಡಗಳ ಬಲಹೀನತೆಯ ಸ್ಥಿತಿಯೊಂದಿಗೆ ಇನ್ನೊಬ್ಬರನ್ನು ಅವಲಂಬಿಸಿಯೇ ತನ್ನ ನಿತ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ. ಆದರೂ ಪ್ರತಿಭಾಶಾಲಿಯಾಗಿ ಉತ್ತಮ ಅಂಕ ಗಳಿಸಿ ಇತರ ಯುವಕರಿಗೆ ಮಾದರಿಯಾಗಿದ್ದರು. ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಮಾಣಿ ಬಾಲವಿಕಾಸ ಶಾಲೆಯಲ್ಲಿ ಮಾಡಿದ ಬಳಿಕ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪಿಯುಸಿಯಲ್ಲಿ ಕಾಮರ್ಸ್, ಪದವಿಯಲ್ಲಿ ಬಿ.ಕಾಂ ಓದಿದ ಆದಿತ್ಯ ಅಕೌಂಟೆನ್ಸಿಯಲ್ಲಿ ಆರು ಸೆಮಿಸ್ಟರ್‌ಗಳಲ್ಲಿ ಶೇ.100 ಅಂಕ ಗಳಿಸಿದ್ದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.96.4 ಅಂಕ ಗಳಿಸಿದ್ದ ಇವರು, ಪಿಯುಸಿಯಲ್ಲೂ ಶೇ.96 ಅಂಕ ಪಡೆದಿದ್ದರು. ಜು.21ರಂದು ಬೆಳಿಗ್ಗೆ ಕರ್ಣಾಟಕ ಬ್ಯಾಂಕಿನ ಪರೀಕ್ಷೆಯಲ್ಲಿ ಭಾಗವಹಿಸಲು ತೆರಳಿದ್ದರು. ಆದರೆ ಉಸಿರಾಟದ ಸಮಸ್ಯೆಯಿಂದ ವಾಪಸಾಗಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

LEAVE A REPLY

Please enter your comment!
Please enter your name here