ರಾಮಕುಂಜ: ಮನೆ ಮುಂದೆ ಅಕ್ರಮ ಕೂಟ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕೊಯಿಲ ಗ್ರಾಮದ ಮಜಲಕ್ಕೆ ನಿವಾಸಿ ಬಶೀರ್ ಎಂಬವರ ಪುತ್ರಿ ಸಂಶೀನಾ ಎಂಬವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ ನಿವಾಸಿಗಳಾದ ಸುದರ್ಶನ್ ಗೆಲ್ಗೊಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ಹಾಗೂ ಇತರರ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರೆ ಸಂಶೀನಾ ಟೈಲರ್ ಕೆಲಸ ಮಾಡಿಕೊಂಡಿದ್ದು ಆಕೆಯ ಸ್ನೇಹಿತೆ ಕಾವ್ಯಳ ಅಕ್ಕ ಗರ್ಭಿಣಿಯಾಗಿದ್ದು ಆಕೆಗೆ ಬಿರಿಯಾನಿ ತಿನ್ನುವ ಆಸೆ ಇದ್ದ ಕಾರಣ ಕಾವ್ಯ ಮತ್ತು ಸಂಶೀನಾ ಬಿರಿಯಾನಿ ತೆಗೆದುಕೊಂಡು ಹೋಗುವರೇ ಜು.12ರಂದು ಆಟೋ ರಿಕ್ಷಾದಲ್ಲಿ ಸಂಶೀನಾರ ಮನೆಗೆ ಬರುತ್ತಿರುವಾಗ ಆರೋಪಿತರಾದ ಸುದರ್ಶನ್ ಗೆಲ್ಗೋಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ಹಾಗೂ ಇತರರು ಕಾರು ಮತ್ತು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಮಧ್ಯಾಹ್ನ 11 ಗಂಟೆ ವೇಳೆಗೆ ಅಕ್ರಮ ಕೂಟ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆವೊಡ್ಡಿ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ. ಅಕ್ರಮ ಕೂಟ ಸೇರಿಕೊಂಡು ಭಯವನ್ನುಂಟು ಮಾಡಿದ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಶೀನಾರವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.