ಪುತ್ತೂರು: ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದ ಸಮಯ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ವಿಟ್ಲದಿಂದ ವರದಿಯಾಗಿದೆ. ಕುರ್ನಾಡುಬೆಟ್ಟು ಆನಂದ (45 ವ.) ಮೃತಪಟ್ಟವರು.ಜು.21ರಂದು ಬೆಳಿಗ್ಗೆ ಪರಿಚಯದ ಸಾಲೆತ್ತೂರು ಗ್ರಾಮದ ಪಾಲ್ತಾಜೆ ಜಯರಾಜ್ರವರ ಮನೆಯ ಸುತ್ತುಮುತ್ತಲಿನ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಕೀಳುತ್ತಿದ್ದ ಸಮಯ ಅವರು ಆಕಸ್ಮಿಕವಾಗಿ ಕೈಕಾಲು ಜ್ಯಾರಿ ಆಯತಪ್ಪಿ ಸುಮಾರು 25 ಅಡಿ ಎತ್ತರದಿಂದ ಕೆಳಗೆ ಬಿದ್ದು ಎದೆಯ ಭಾಗಕ್ಕೆ ತೀವ್ರ ತರಹದ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಮಂಚಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ ವೇಳೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಅವರ ಅಳಿಯ ಲೋಕೇಶ್ ಎಂಬವರು ನೀಡಿರುವ ದೂರಿನ ಮೇರೆಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.