ಪುತ್ತೂರು; ಹೆರಿಗೆಯಾದ ಬಳಿಕ ಉಂಟಾದ ವಿಪರೀತ ರಕ್ತ ಸ್ರಾವದಿಂದಾಗಿ ಬಾಣಂತಿಯೋರ್ವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜು.23ರಂದು ನಡೆದಿದೆ.
ಪಡ್ನೂರು ಗ್ರಾಮದ ಪರಮಾರು ಕೂಸಪ್ಪ ಗೌಡರ ಪತ್ನಿ ಮೋನಮ್ಮ(36ವ.) ಮೃತಪಟ್ಟವರು. ಮೋನಮ್ಮರವರನ್ನು ಎರಡನೇ ಹೆರಿಗೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಜು.22ರಂದು ಸಂಜೆ ಅವರಿಗೆ ಸಾಮಾನ್ಯ ಹೆರಿಗೆಯಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರಾತ್ರಿ ವೇಳೆಗೆ ವಿಪರೀತವಾಗಿ ರಕ್ತ ಸ್ರಾವ ಉಂಟಾಗಿತ್ತು. ಹೀಗಾಗಿ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಗು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮೃತರು ಪತಿ ಕೂಸಪ್ಪ ಗೌಡ ಹಾಗೂ ಎರಡು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.