- ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಾಗ ನಮ್ಮ ಜನ್ಮ ಸಾರ್ಥಕ.- ಕೇಶವ ತಂತ್ರಿ
- ಭಕ್ತ ಮಹಾಶಯರ ಸಹಕಾರದಿಂದ ಕ್ಷೇತ್ರದ ಎಲ್ಲಾ ಕಾರ್ಯಕ್ರಮ ಯಶಸ್ವಿ- ಜನಾರ್ದನ ಆಚಾರ್ಯ ಕಾಣಿಯೂರು
ಕಾಣಿಯೂರು: ಹೊಸದಾಗಿ ನಿರ್ಮಾಣಗೊಂಡ ದೇವಸ್ಥಾನದಲ್ಲಿ ಸಿಗುವ ಫಲಕ್ಕಿಂತ ಹಳೆಯ ದೇವಸ್ಥಾನಗಳು ಜೀರ್ಣೋದ್ಧಾರಗೊಂಡಾಗ ದಶ ಪಟ್ಟು ಫಲಗಳು ಸಿಗುತ್ತವೆ. ಸಾವಿರಾರು ಜನರ ಕೈಗಳು ಒಟ್ಟು ಸೇರಿದ ಪರಿಣಾಮ ಇವತ್ತು ಕುಕ್ಕಟ್ಟೆ ದೇವಸ್ಥಾನ ಸುಂದರವಾಗಿ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ ಎಂದು ಕ್ಷೇತ್ರದ ತಂತ್ರಿ ಕೇಶವ ತಂತ್ರಿ ಅಂಕಶಾಲೆ ಮೂಡಬಿದ್ರೆ ಹೇಳಿದರು.
ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಶ್ರೀ ದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಿಮಿತ್ತ ಸಾನಿಧ್ಯ ಸ್ಥಿರತ್ವಕ್ಕಾಗಿ ಜು. 23ರಂದು ನಡೆದ ದೃಢ ಕಲಶಾಭಿಷೇಕದ ಧಾರ್ಮಿಕ ಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ಶ್ರೇಷ್ಠವಾದ ನರ ಜನ್ಮದಲ್ಲಿ ಹುಟ್ಟಿರುವುದು ನಮ್ಮ ಪೂರ್ವಕಾಲದ ಸುಕೃತವಾದ ಫಲದಿಂದ. ನಮ್ಮ ಮೂರು ದಿನದ ಬಾಳಿನಲ್ಲಿ ನಾವು ದೇವಸ್ಥಾನ ಜೀರ್ಣೋದ್ಧಾರಗೊಳಿಸುವುದು, ಬ್ರಹ್ಮಕಲಶ ಮುಂತಾದ ಪುಣ್ಯವಾದ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾವು ನಮ್ಮ ಶ್ರೇಷ್ಠವಾದ ಸಂಸ್ಕಾರಗಳನ್ನು ನಿತ್ಯ ನಮ್ಮ ಜೀವನದಲ್ಲಿ ಅನುಷ್ಠಾನ ಮಾಡುವ ಮೂಲಕ ನಮ್ಮ ಮಕ್ಕಳಿಗೂ ತಿಳಿಯ ಪಡಿಸಬೇಕು. ಮಕ್ಕಳು ಧಾರ್ಮಿಕವಾಗಿ ತೊಡಗಿಸಿಕೊಳ್ಳುವ ರೀತಿಯಲ್ಲಿ ಬೆಳೆಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜನಾರ್ದನ ಆಚಾರ್ಯ ಕಾಣಿಯೂರು, ದೇವರ ಸೇವೆಯಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಾಗ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಕಾಣುತ್ತೇವೆ, ದೇವರ ಅನುಗ್ರಹವು ಪ್ರಾಪ್ತಿಯಾಗುತ್ತದೆ. ದೇವಸ್ಥಾನದ ಬ್ರಹ್ಮಕಲಶೋತ್ಸವ, ದೃಢಕಲಶಾಭಿಷೇಕ ಮುಂತಾದ ಕಾರ್ಯಗಳು ಎಲ್ಲಾ ಭಕ್ತ ಮಹಾಶಯರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ. ಮುಂದೆಯೂ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲಾರೂ ಕೈಜೋಡಿಸಲೇ ಬೇಕಾದ ಅನಿವಾರ್ಯತೆ ಇದೆ. ದೇವಸ್ಥಾನದ ಆಡಳಿತ ಸಮಿತಿಯೊಂದಿಗೆ ನಾವೆಲ್ಲರೂ ಕೈಜೋಡಿಸಿಕೊಂಡು ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರ ಆಚಾರ್ಯ ಇಳಂತಿಲ, ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ ಮರೋಳಿ, ಕಾರ್ಯದರ್ಶಿ ಬಾಲಕೃಷ್ಣ ಪುರೋಹಿತ್, ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಜನಾರ್ದನ ಆಚಾರ್ಯ ಕುಕ್ಕಟ್ಟೆ, ಚಿನ್ನಯ್ಯ ಆಚಾರ್ಯ ಕುಕ್ಕಟ್ಟೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ ಉಪಸ್ಥಿತರಿದ್ದರು. ಶೇಷಪ್ಪ ಆಚಾರ್ಯ ನಿಡ್ಮಾರು ಪ್ರಾರ್ಥಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಧನಂಜಯ ಆಚಾರ್ಯ ಏನೆಕಲ್ಲು ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ಮಧುಚಂದ್ರ ಆಚಾರ್ಯ ಪಂಜ ವಂದಿಸಿದರು. ನಾರಾಯಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ತಂತ್ರಿ ಕೇಶವ ತಂತ್ರಿ ಅಂಕಶಾಲೆ ಮೂಡಬಿದ್ರೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಯಕ್ಷಗಾನ ತಾಳಮದ್ದಳೆ: ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನ ಮೂಡಬಿದಿರೆ ಇವರಿಂದ ಯಕ್ಷಗಾನ ತಾಳ ಮದ್ದಳೆ ಜರಗಿತು.
ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಿಮಿತ್ತ ಸಾನಿಧ್ಯ ಸ್ಥಿರತ್ವಕ್ಕಾಗಿ ಕ್ಷೇತ್ರದ ತಂತ್ರಿ ಕೇಶವ ತಂತ್ರಿ ಅಂಕಶಾಲೆ ಮೂಡಬಿದ್ರೆ ಯವರ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೃಢಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು.