ಉಪ್ಪಿನಂಗಡಿ: ಇಲ್ಲಿನ ನಟ್ಟಿಬೈಲ್ನ ಶ್ರೀ ರಾಮ ಶಾಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ನ ಸಹಯೋಗದಲ್ಲಿ ಭತ್ತ ಬೇಸಾಯ ಮತ್ತು ಯಂತ್ರಶ್ರೀಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜು.23ರಂದು ಲಕ್ಷ್ಮೀನಗರದ ಮುಳಿಯ ಕುಟುಂಬಸ್ಥರ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಎಸ್ಸೆಫ್ನ ನಿವೃತ್ತ ಕಮಾಂಡರ್ ಚಂದಪ್ಪ ಮೂಲ್ಯ, ಒಂದು ಕಾಲದಲ್ಲಿ ಕೃಷಿ ಕ್ರಾಂತಿ ಮಾಡಿದ್ದ ಭಾರತದಲ್ಲಿ ಕಾಲ ಬದಲಾದಂತೆ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ದ.ಕ. ಜಿಲ್ಲೆಯವರು ಅಕ್ಕಿಗಾಗಿ ಇನ್ನೊಂದು ಜಿಲ್ಲೆಯನ್ನು ಅವಲಂಬಿತರಾಗುವ ಕಾಲ ಬಂದಿದೆ. ಆದ್ದರಿಂದ ಕೃಷಿಯತ್ತ ಒಲವು ತೋರಬೇಕಾದ ಅಗತ್ಯವಿದ್ದು, ಮತ್ತೆ ಆಹಾರ ಧಾನ್ಯಗಳ ಉತ್ಪಾದನೆಗೆ ಒತ್ತು ನೀಡಬೇಕಿದೆ ಎಂದರು.