ಫೋಟೋಗ್ರಾಫರ್‍ಸ್ ಎಸೋಸಿಯೇಶನ್ ವಾರ್ಷಿಕ ಮಹಾಸಭೆ

0

ಪುತ್ತೂರು:ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್ ಇದರ ಪುತ್ತೂರು ವಲಯದ ವಾರ್ಷಿಕ ಮಹಾಸಭೆಯು ಜು.23ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ಆನಂದ ಎನ್. ಬಂಟ್ವಾಳ್ ಮಾತನಾಡಿ, ಸಮಾಜ ಹಾಗೂ ಸಂಘದ ಸದಸ್ಯರಿಗೆ ಬಹು ಆವಶ್ಯಕವಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುವ ಮುಖಾಂತರ ಸಂಘವು ಪುತ್ತೂರಿನಲ್ಲಿ ಬಹಳಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಂಘವನ್ನು ಇನ್ನಷ್ಟು ಬಲಪಡಿಸಿವ ನಿಟ್ಟಿನಲ್ಲಿ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿ ಸಂಘದ ಸಾಧನೆಯನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಗೇಶ್ ಟಿ.ಎಸ್ ಮಾತನಾಡಿ, ಸಂಘದಲ್ಲಿ ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಸಂಘವು ಮುನ್ನಡೆಯುತ್ತಿದೆ. ಸಂಘಟನೆಯ ಮಹತ್ವವನ್ನು ವಿವರಿಸಿದ ಅವರು, ಸಂಘದ ಸದಸ್ಯರಿಗೆ, ಸಮಾಜಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಮಾತನಾಡಿ, ಛಾಯಾಗ್ರಾಹನ ವೃತ್ತಿಯಲ್ಲಿ ಸಮಯ ಪ್ರಜ್ಞೆ ಅಗತ್ಯ. ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಸೇವೆ ನೀಡಬೇಕು. ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಆವಶ್ಯಕತೆ ಇದೆ.

ಮುಖ್ಯ ಅತಿಥಿಯಾಗಿದ್ದ ಎಸ್‌ಕೆಪಿಎ ಸೇವಾ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ್ ರಾವ್, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್‌ನ ಜಿಲ್ಲಾ ಕಾರ್ಯದರ್ಶಿ ನಿತಿನ್ ಬೆಳುವಾಯಿ ಮಾತನಾಡಿ, ಸಂಘಟನೆ ಮತ್ತು ಸಂಘಟನೆಯ ಮಹತ್ವಗಳ ಬಗ್ಗೆ ವಿವರಿಸಿದರು. ಪುತ್ತೂರು ವಲಯದ ಗೌರವಾಧ್ಯಕ್ಷ ಹರೀಶ್ ಪುಣಚ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಎಸ್‌ಎಸ್‌ಎಲ್‌ಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರಾದ ಸುದರ್ಶನ್ ರಾವ್‌ರವರ ಪುತ್ರ ಅಭಯ್ ರಾವ್ ಹಾಗೂ ಸುಧೀರ್ ಹೆಬ್ಬಾರ್‌ರವರ ಪುತ್ರಿ ಸನ್ನಿಧಿ ಹೆಬ್ಬಾರ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸದಸ್ಯ ಶಾಂತ ಕುಮಾರ್ ಪ್ರಾರ್ಥಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ವರದಿ ವಾಚಿಸಿದರು. ಕೋಶಾಧಿಕಾರಿ ಗಿರಿಧರ್ ಲೆಕ್ಕಪತ್ರ ಮಂಡಿಸಿದರು. ಗಣೇಶ್ ಕಟ್ಟಪುಣಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಎಲಿಯ, ಸಂತೋಷ್, ಗಿರೀಶ್ ಕಲ್ಲೇರಿ, ವಿನಯ ರೈ ಪಂಜಳ, ಚಂದ್ರಶೇಖರ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರಘು ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here