ಪುತ್ತೂರು: ಪುತ್ತೂರಿನ ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲಿ 94ವರುಷಗಳ ಶೈಕ್ಷಣಿಕ ಸೇವೆಯನ್ನು ನೀಡುತ್ತಿರುವ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರು, ಶಾಲಾ ಸಂಚಾಲಕಿ ಭಗಿನಿ. ಪ್ರಶಾಂತಿ. ಬಿ.ಎಸ್. ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಸಾಹಿತಿಗಳು, ಅಂಕಣಕಾರರು, ಪ್ರಗತಿಪರ ಕೃಷಿಕರು, ವೃತ್ತಿಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಡಾ. ನರೇಂದ್ರ ರೈ ದೇರ್ಲ ಮಾತನಾಡಿ ಕೋರೋನ ಕಾಲ ಘಟ್ಟದಲ್ಲಿ ಮಕ್ಕಳಲ್ಲಿ ಮರೆಯಾದ ಕೌಶಲ್ಯವನ್ನು ನೆಲದ ಶಿಕ್ಷಣದ ಮೂಲಕ ಹೊರ ತೆಗೆಯಬೇಕಾಗಿದೆ. ಮನುಷ್ಯ ಮನುಷ್ಯನನ್ನು ಗೌರವಿಸುವ ವಾತಾವರಣವನ್ನು ಮಕ್ಕಳಲ್ಲಿ ಮೂಡಿಸಿ ಮಕ್ಕಳಲ್ಲಿ ಭಾರತೀಯತೆಯನ್ನು ಮೂಡಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಭಗಿನಿ. ಪ್ರಶಾಂತಿ.ಬಿ.ಎಸ್. ಮಾತನಾಡಿ ನಮ್ಮ ಸಂಸ್ಥೆ ಕಳೆದ ತೊಂಭತ್ತನಾಲ್ಕು ವರುಷಗಳಿಂದ ಲಕ್ಷಾಂತರ ಮಕ್ಕಳ ಬದುಕನ್ನು ಬೆಳಗಿದೆ. ನಮ್ಮ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನು ಕಳುಹಿಸಿದ ನಿಮ್ಮ ಭರವಸೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಹೊಣೆ ನಮ್ಮದಾಗಿದೆ ಎಂದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ ಮಾತನಾಡಿ, ಒಂದು ತರಗತಿಯ ಎಲ್ಲಾ ಮಕ್ಕಳು ಏಕಕಾಲದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯುವ ಎರಡು ಕೊಠಡಿಯ ಸೌಲಭ್ಯವಿರುವ ಐವತ್ತಾರು ಕಂಪ್ಯೂಟರ್ಗಳ ಕಂಪ್ಯೂಟರ್ ಲ್ಯಾಬೋರೇಟರ್ ಇರುವ ಏಕೈಕ ಶಾಲೆ ನಮ್ಮದಾಗಿದೆ ಎಂದರು. ಶಾಲಾ ಸುರಕ್ಷಾ ಸಮತಿ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ “ಪೋಷಕರು ಹಾಗು ಶಿಕ್ಷಕರ ಮಧ್ಯೆ ಸೌಹಾರ್ದ ಸಂವಾದ, ಸಮನ್ವಯತೆಯ ಸಂಪರ್ಕದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದರು.
ನೂತನ ಸಮಿತಿ ರಚನೆ:
ಕಾರ್ಯಕ್ರಮದಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಸಮಿತಿ ಉಪಾಧ್ಯಕ್ಷರಾಗಿ ರಘುನಾಥ ರೈ ಹಾಗೂ ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ ಭಟ್ರವರನ್ನು ಪುನರಾಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಾದ ಚಿನ್ಮಯ್, ಪ್ರೀತಿಕಾ, ಜೀವಿತ. ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಭಗಿನಿ. ವೆನಿಶಾ. ಬಿ. ಎಸ್. ಸ್ವಾಗತಿಸಿದರು. ಶಿಕ್ಷಕಿಯರಾದ ವಿಲ್ಮಾ ಫೆರ್ನಾಂಡಿಸ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು, ಭಗಿನಿ. ವಿನೀತಾ ಪಿರೇರಾ ವಂದಿಸಿದರು. ಜೋಸ್ಲಿನ್ ಪಾಯಸ್, ಜಯಲಕ್ಷ್ಮೀ ಹಾಗೂ ಮಮತಾ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.